” ರಾಮಾಯಣ ಸಿದ್ಧ ” ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣೆ.

ಇತರೆ

 

ಶ್ರೀ ಮದ್ವಾಲ್ಮೀಕಿ ರಾಮಾಯಣದ ೧೦೮ ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ಕಾಟುಕುಕ್ಕೆ ಘಟಕದ ಗುರಿಕ್ಕಾರರಾಗಿರುವ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಸೆ.೨೬ರಂದು ಸಂಪನ್ನವಾಯಿತು.

ಧ್ವಜಾರೋಹಣ ಶಂಖನಾದವಾಗಿ ಗುರುವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮಹಾ ಮಂಡಲ ಮುಷ್ಠಿ ಭಿಕ್ಷಾ ಪ್ರಧಾನರಾದ ಶ್ರೀಕೃಷ್ಣ ಭಟ್ಟ ಮೀನಗದ್ದೆ ಅವರು ಗೋಪೂಜೆ ನೆರವೇರಿಸಿದರು. ಬಳಿಕ ಶ್ರೀರಾಮದೇವರ ಪೂಜೆ, ಗೋಪಾಲಕೃಷ್ಣ ಪೂಜೆ ಇವು ಶಾಸ್ತ್ರೋಕ್ತವಾಗಿ ಜರಗಿದವು. ಬಿ ವಿ ನಾರಾಯಣ ಭಟ್ಟರು ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣದ ಶ್ರೀ ರಾಮ ಪಟ್ಟಾಭಿಷೇಕ ಸರ್ಗವನ್ನು ಪಾರಾಯಣ ಮಾಡಿದರು.

ಮಹಾಮಂಡಲ ಧರ್ಮಕರ್ಮ ವಿಭಾಗದ ಸಹಕಾರ್ಯದರ್ಶಿ ವೇ ಮೂ ಕೇಶವಪ್ರಸಾದ ಭಟ್ಟ ಕೂಟೇಲು ಇವರು ದಿಕ್ಸೂಚಿ ಮಾತುಗಳನ್ನಾಡಿ ಶ್ರೀ ಮದ್ವಾಲ್ಮೀಕಿ ರಾಮಾಯಣದ ವಿಶೇಷತೆ, ಔಚಿತ್ಯ, ಉದ್ದೇಶ, ಪರಿಣಾಮ, ಫಲ ಇವುಗಳ ಬಗ್ಗೆ ವೇದದ ಶಾಸ್ತ್ರೀಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

ಬಿ ವಿ ನಾರಾಯಣ ಭಟ್ಟ ಮತ್ತು ಶೈಲಾ ಯನ್ ಭಟ್ ಇವರನ್ನು ಶಾಲುಹೊದೆಸಿ ಶ್ರೀಗಂಧ ಹಾರಾರ್ಪಣೆ ಮಾಡಿ ಫಲ, ಅಭಿನಂದನಾ ಪತ್ರ ಇವುಗಳನ್ನಿತ್ತು ಗೌರವಿಸಲಾಯಿತು. ದಂಪತಿಗಳಿಗೆ ಮಾತೆಯರು ತಿಲಕವಿಟ್ಟು ಆರತಿ ಬೆಳಗಿದರು.

ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನೀ ಸಂಘಟನಾ ನೇತೃತ್ವದಲ್ಲಿ ಮಂಗಳೂರು ಮಂಡಲ ಕನ್ಯಾನ ವಲಯ ಒಡಿಯೂರು ನಿವಾಸಿ ದಿವ್ಯಾ ಭಾರತಿ ಅವರು ರಚಿಸಿದ ಬಿ ವಿ ನಾರಾಯಣ ಭಟ್ಟರ ಭಾವ ಚಿತ್ರವನ್ನು ಗೌರವ ಪೂರ್ಣವಾಗಿ ಅವರಿಗೆ ಸಮರ್ಪಣೆ ಮಾಡಿದರು.

ಕುಮಾರಿ ದಿವ್ಯಾ ಭಾರತಿ ಅವರಿಗೆ ಮಹಾ ಮಂಡಲ ಮಾತೃತ್ವಂ ಸಂಚಾಲಕಿ ಈಶ್ವರಿ ಬೇರ್ಕಡವು, ಮಂಡಲ ಮಾತೃ ವಿಭಾಗ ಪ್ರಧಾನೆ ಕುಸುಮಾ ಪೆರ್ಮುಖ ಇವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿದರು.

ಮಾಹಾ ಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಹಾಮಂಡಲ ಶಾಸನತಂತ್ರದ ಗುರುಸಂಪರ್ಕ ಶ್ರೀಸಂಯೋಜಕರು ಹಾಗೂ ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ, ಶಿವಪ್ರಸಾದ ವರ್ಮುಡಿ, ಜಯದೇವ ಖಂಡಿಗೆ ಇವರು ಅಭಿನಂದನಾ ಭಾಷಣ ಮಾಡಿದರು.

ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಮಾಹಿತಿ ನೀಡಿದರು. ಗೋಶಾಲಾ ಆಡಳಿತ ಮಂಡಳೀಯ ಕಾರ್ಯದರ್ಶಿ ಕೃಷ್ಣ ಪ್ರಸಾದ ಬನಾರಿ ಇವರು ಗೋಶಾಲೆಯ ಬಗ್ಗೆ ಮಾಹಿತಿಗಳನ್ನಿತ್ತರು. ಕುಂಬಳೆ ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ವಂದಿಸಿದರು. ಎಣ್ಮಕಜೆ ವಲಯ ಕಾರ್ಯದರ್ಶಿ ಶಂಕರಪ್ರಸಾದ ಕುಂಚಿನಡ್ಕ ಇವರು ಸಭಾ ನಿರೂಪಣೆ ಮಾಡಿ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದರು.

ರಾಮಾಯಣ ಸಿದ್ಧ
ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ, ಲೋಕಲ್ಯಾಣಾರ್ಥವಾಗಿ ಶಿಷ್ಯರ ಮನೆಗಳಲ್ಲಿ೧೦೦೮ ರಾಮಾಯಣ ಪಾರಾಯಣ ಪ್ರಾರಂಭವಾಯಿತು. ಎಣ್ಮಕಜೆವಲಯದ ಕಾಟುಕುಕ್ಕೆ ಘಟಕದ ಗೌರವಾನ್ವಿತ ಗುರಿಕ್ಕಾರರು ಬಿ.ವಿ.ನಾರಾಯಣ ಭಟ್ ಅವರು ಶ್ರೀಸಂಸ್ಥಾನದವರ ಮನೋಭೀಷ್ಟೆಯನ್ನು ಪೂರೈಸುವ ಸಂಕಲ್ಪದಂತೆ, ಶ್ರೀಗುರುಗಳ ಆಶೀರ್ವಾದದೊಂದಿಗೆ ಪಾರಾಯಣವನ್ನು ನಿರಂತರವಾಗಿ ಮಾಡುತ್ತಲೇ ಇದ್ದರು. ವಿದೇಶಕ್ಕೆ ಹೋದ ಸಂದರ್ಭದಲ್ಲಿಯೂ ಪಾರಾಯಣ ಮಾಡಿರುವುದು ಇವರ ಭಕ್ತಿ, ನಿಷ್ಟೆಗೆ ಸಾಕ್ಷಿ. ಕೊರೊನಾ ನಿವಾರಣೆಗಾಗಿ ಕೂಡಾ ಪಾರಾಯಣ ಮಾಡಿ ಸಮರ್ಪಣೆ ಮಾಡಿರುತ್ತಾರೆ. ಸದ್ಯ ೧೦೮ ಪಾರಾಯಣ ಸಂಪನ್ನಗೊಳಿಸಿದ್ದಾರೆ. ಪಾರಾಯಣವು ಮುಂದುವರಿಯುತ್ತಾ ಇದೆ. ಇವರ ಭಕ್ತಿ, ನಿಷ್ಟೆ, ಸಂಕಲ್ಪವನ್ನು ಕಂಡು ಶ್ರೀ ಸಂಸ್ಥಾನದವರು “ರಾಮಾಯಣಸಿದ್ಧ” ಎಂಬದಾಗಿ ಬಿರುದನ್ನು ಅನುಗ್ರಹಿಸಿ ಆಶೀರ್ವದಿಸಿದ್ದಾರೆ.

Author Details


Srimukha

Leave a Reply

Your email address will not be published. Required fields are marked *