ಪಳ್ಳತ್ತಡ್ಕ ವಲಯದಲ್ಲಿ ವಾರ್ಷಿಕೋತ್ಸವದ ಸಂಭ್ರಮ : ಶಿಷ್ಯವೃಂದದಿಂದ ಅಮೃತಪಥ, ವೈದಿಕ ಕಾರ್ಯಕ್ರಮ

ಸುದ್ದಿ

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ವಾರ್ಷಿಕೋತ್ಸವವು ನವೆಂಬರ್ 18ರ ಭಾನುವಾರ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಳಗ್ಗೆ ಗೋಪೂಜೆ, ಗಣಪತಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಪರಮೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಶ್ರೀಸತ್ಯನಾರಾಯಣ ಪೂಜೆ ಸೇರಿದಂತೆ ಅನೇಕ ವೈದಿಕ ಕಾರ್ಯಕ್ರಮಗಳು ನೆರವೇರಿದವು. ವಲಯ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಏತಡ್ಕ ದಂಪತಿ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಕರ್ತೃಗಳಾಗಿ ಪಾಲ್ಗೊಂಡಿದ್ದರು.

 

ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರಾದ ಗುಣಾಜೆ ಶ್ರೀ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಳ್ಳೇರಿಯ ಮಂಡಲದ ಅಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಮಾತನಾಡುತ್ತಾ ವಲಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೂಜಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳು ಧಾರ್ಮಿಕತೆಯೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ಹೆತ್ತವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಶ್ರೀಮಠದ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು. ಜೊತೆಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಆಶೀರ್ವದಿಸಿದರು.

 

ಇದೇ ಸಂದರ್ಭದಲ್ಲಿ ಮುಳ್ಳೇರಿಯ ಮಂಡಲದ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಸರ್ಪಮಲೆ, ವಲಯ ವ್ಯಾಪ್ತಿಯಲ್ಲಿ ಗೋಸೇವೆಗೈದ ಕಾರ್ಯಕರ್ತ ಚಲಿಸುವ ಗೋಆಲಯದ ರೂವಾರಿ ಶ್ರೀ ಗಣೇಶ್ ಭಟ್ ಮುಣ್ಚಿಕ್ಕಾನ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಇವರು ಗಾಯಗೊಂಡ ಗೋವನ್ನು ಆರೈಕೆ ಮಾಡಿ ಸಮಾಜಕ್ಕೆ ಆದರ್ಶವಾಗಿದ್ದಾರೆ. ಶ್ರೀಸಂಸ್ಥಾನದವರ ಸಮಾಜಮುಖೀ ಯೋಜನೆಗಳನ್ನು ಶಿಷ್ಯವೃಂದಕ್ಕೆ ತಲುಪಿಸುವಲ್ಲಿ ಪಳ್ಳತ್ತಡ್ಕ ವಲಯವು ಮುಂಚೂಣಿಯಲ್ಲಿದ್ದು ಕಾರ್ಯರೂಪಕ್ಕೆ ತರುವಲ್ಲಿ ವಲಯದ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದರು. ಶ್ರೀಮಠದ ಎಲ್ಲ ಸೇವಾಯೋಜನೆಗಳಲ್ಲೂ ದಂಪತಿಯಾಗಿ ಪಾಲ್ಗೊಳ್ಳುತ್ತಿರುವ ಬೊಳ್ಳೂರು ಶ್ರೀ ಸುಬ್ರಹ್ಮಣ್ಯ ಭಟ್- ಶ್ರೀಮತಿ ಸ್ವರ್ಣಲತಾ ಅವರನ್ನು ಗೌರವಿಸಲಾಯಿತು.

 

ಪಳ್ಳತ್ತಡ್ಕ ವಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಕೆರೆಮೂಲೆ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಮಂಡಲ ಮಾತೃವಿಭಾಗದ ಶ್ರೀಮತಿ ಕುಸುಮಾ ಪೆರ್ಮುಖ, ಬಿಂದು ಸಿಂಧು ವಿಭಾಗದ ಶ್ರೀಮತಿ ದೇವಕಿ ಪನ್ನೆ, ಶಿಷ್ಯಮಾಧ್ಯಮ ವಿಭಾಗದ ಸರಳಿ ಶ್ರೀ ಮಹೇಶ, ವಿದ್ಯಾರ್ಥಿವಾಹಿನಿಯ ಪ್ರಧಾನ ಶ್ರೀ ಕೇಶವ ಪ್ರಸಾದ ಎಡೆಕ್ಕಾನ, ವಲಯದ ದಿಗ್ದರ್ಶಕ ಪತ್ತಡ್ಕ ಶ್ರೀ ಗಣಪತಿ ಭಟ್, ಆನೆಪಳ್ಳ ಶ್ರೀ ನಾರಾಯಣ ಭಟ್, ಪೆರುಮುಂಡ ಶ್ರೀ ಶಂಕರನಾರಾಯಣ ಭಟ್, ಪೆರಡಾಲ ವಲಯದ ಅಧ್ಯಕ್ಷ ಶ್ರೀ ಹರಿಪ್ರಸಾದ ಪೆರ್ಮುಖ, ನೀರ್ಚಾಲು ವಲಯದ ಉಪಾಧ್ಯಕ್ಷೆ ಶ್ರೀಮತಿ ಕನಕವಲ್ಲಿ ಬಡಗಮೂಲೆ, ಕೋಶಾಧಿಕಾರಿ ಶ್ರೀ ಈಶ್ವರ ಭಟ್ ಹಳೆಮನೆ, ಗುರಿಕ್ಕಾರರು, ಶ್ರೀ ಲಕಾರ್ಯಕರ್ತರು ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

 

ಸಭಾ ಕಾರ್ಯಕ್ರಮದ ಅನಂತರ ಪಳ್ಳತ್ತಡ್ಕ ರಸ್ತೆ ಬದಿಯಲ್ಲಿ ಗೋವು ಸಂಚರಿಸುವ ದಾರಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಅಮೃತಪಥವನ್ನಾಗಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *