ಸಾಗರ: ಸಾಮಾಜಿಕವಾಗಿ ಬದುಕನ್ನು ಕಂಡುಕೊಳ್ಳುವವನಿಗೆ ಒಂಟಿತನ ಎಂದೂ ಕಾಡುವುದಿಲ್ಲ ಹಾಗಾಗಿ ಸಂಘ ಜೀವಿಯಾಗಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾ ಲಲಿತೋಪಾಖ್ಯಾನ ಪ್ರವಚನದ ಸಮಾರೋಪದಲ್ಲಿ ಅವರು ನುಡಿದರು.
ಪ್ರಸ್ತುತ ದಿನಮಾನದಲ್ಲಿ ವೃದ್ದರನ್ನು ಒಂಟಿಯಾಗಿ ಬಿಟ್ಟು ಹೋಗಲಾಗುತ್ತಿದೆ ಆಗೆಲ್ಲ ಅವರನ್ನು ಒಂಟಿತನ ಕಾಡುವುದು ಸಹಜ ಆದರೆ ಸಂಘ ಜೀವಿಯಾಗುವುದು ಒಂದು ಪ್ರಯೋಜನವಾದರೆ ಮೊದಲಿಂದಲೂ ಆಧ್ಯಾತ್ಮಿಕಕ್ಕೆ ಶರಣಾಗಿ ಬದುಕಿದರೆ ಕೊನೆಯಲ್ಲಿ ಯಾವುದೇ ಕಾರಣಕ್ಕೂ ಒಂಟಿತನ ಬಾಧಿಸುವುದಿಲ್ಲ ಮತ್ತು ಒಂದೊಮ್ಮೆ ಒಂಟಿತನವಿದ್ದರೂ ಆಧ್ಯಾತ್ಮದ ನೆರಳಲ್ಲಿ ಅದೇ ಸಖ್ಯ ಎನಿಸಲಿದೆ ಎಂದರು.
ಸಂಜೆ ಶ್ರೀಚಕ್ರ ಪೂಜೆಯ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿತು. ಐದು ಸಾವಿರಕ್ಕೂ ಹೆಚ್ಚು ಜನ ಭಕ್ತರು ಈ ಪೂಜೆಗೆ ಪ್ರತ್ಯಕ್ಷ ಸಾಕ್ಷಿಯಾದರು. ಸಂಸದ ಬಿ.ವೈ. ರಾಘವೇಂದ್ರ ಶ್ರೀಪೂಜೆಯಲ್ಲಿ ಭಾಗಿಯಾಗಿ ನಂತರ ಶ್ರೀಗಳವರಿಂದ ಆಶೀರ್ವಾದ ಪಡೆದುಕೊಂಡರು.