ಹಿರಿಯರ ಗೋಸೇವೆ ಸರ್ವರಿಗೂ ಮಾದರಿ

ಕೋಲಾರ: ಅಧಿಕ ಜ್ಯೇಷ್ಠ ಶುಕ್ಲ ದ್ವಾದಶಿಯಂದು (28-05-2026) ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಗೋಶಾಲೆಯಲ್ಲಿ ನೆಲೆಸಿರುವ ಶ್ರೀ ಸಿದ್ಧಾಂಜನೇಯಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು, ₹85,000 ಮೌಲ್ಯದ (65 ಚೀಲ) ಹಿಂಡಿ ದಾನ ನೀಡಿದರು. ಗೋವುಗಳಿಗೆ ಸ್ವತಃ ಗ್ರಾಸ ನೀಡಿ ಗೋಶಾಲೆ ಪರಿಸರದಲ್ಲಿದ್ದು ಸಂತೋಷ ಪಟ್ಟರು. ದೇಶದ ಅಪೂರ್ವ ಗೋಸಂಪತ್ತನ್ನು ಉಳಿಸುವ ಮಹಾಕಾರ್ಯದಲ್ಲಿ ಹಿರಿಯರ ಈ ಗೋಸೇವೆ ಎಲ್ಲರಿಗೂ ಮಾದರಿಯಾಗಿದೆ.

ಸ್ವಾಗತ ಭಾರತೀ

ಮುಜುಂಗಾವು: ಅಧಿಕ ಜ್ಯೇಷ್ಠ ಕೃಷ್ಣ ಪಾಡ್ಯದಂದು (01-06-2026) ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆಯವರು ಆಗಮಿಸಿ ‘ಸಂಸ್ಕೃತಿ ಸಂಸ್ಕಾರಯುತ ಶಿಕ್ಷಣ ಇಂದಿನ ಆವಶ್ಯಕತೆಗಳಲ್ಲಿ ಒಂದು. ವಿದ್ಯಾಪೀಠ ಇಂತಹ ಶಿಕ್ಷಣ ನೀಡುವುದರಲ್ಲಿ ಮುಂದಿದೆ. ವಿದ್ಯಾರ್ಥಿಗಳು ಈ ಶಿಕ್ಷಣ ಪದ್ಧತಿಯನ್ನು ಪಡೆದು ವಿಕಸಿತ ಭಾರತದ ಕಲ್ಪನೆಯನ್ನು ಸಾಕರಗೊಳಿಸುವಂತಾಗಲಿ’ ಎಂದು ತಮ್ಮ ಮಾತಿನಿಂದ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. […]