ಸಾಗರ: ಕರ್ಮದಿಂದ ಅಲ್ಲ ತ್ಯಾಗದಿಂದ ಮಾತ್ರ ಶ್ರೇಷ್ಟತೆ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಎರಡನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದರು.
ನಿತ್ಯ ಬೇರೆಬೇರೆ ರೀತಿಯ ವಸ್ತು ವಿಷಯವನ್ನು ಬಯಸುವುದು ಮನುಷ್ಯನ ಕ್ರಿಯೆಯಾದರೆ, ನಾನಾ ಅವತಾರದಲ್ಲಿ ನಮಗೆ ದರ್ಶನದ ಭಾಗ್ಯ ನೀಡುವುದು ಭಗವಂತನ ಸ್ವಭಾವ. ಅಂತಯೇ ಭಗವಂತನಲ್ಲಿ ನಾವು ಅಪೇಕ್ಷೆಗಳ ಪಟ್ಟಿಯನ್ನು ಇಟ್ಟು ಕೇಳುತ್ತೇವೆ ಆದರೆ ನಿಜವಾಗಿ ನಮಗೇನು ಬೇಕು ಎಂದು ಭಗವಂತನೇ ಅರಿತಿರುವಾಗ ಕೇಳುವ ಅಗತ್ಯ ಇರುವುದೇ ಇಲ್ಲ. ಹಾಗಾಗಿಯೇ ದೇವಿ ಅವತಾರವಾಗುವಾಗ ದೇವೇಂದ್ರ ತಾಯಿಗೆ ಶರಣಾಗಿ ಎಲ್ಲವೂ ತಿಳಿದಿರುವ ನೀನು ರಕ್ಷಿಸಬೇಕು ಎಂದು ಯಾಚಿಸಿದ. ಅದೇ ರೀತಿ ನಮ್ಮ ಬದುಕಿನಲ್ಲಿಯೂ ಎಲ್ಲ ತಿಳಿದಿರುವ ತಾಯಿಯಲ್ಲಿ ಮೊರೆ ಇಡಬೇಕು ಅಷ್ಟೆ ಬಯಕೆಗಳನ್ನು ಕೇಳುವುದು ತರವಲ್ಲ ಎಂದರು.
ಸಮಾಜ ಸಂಭ್ರಮ
ಮೋಗವೀರ, ಗಂಗಾಮತಸ್ಥ, ಬಂಟ ಯಾನೆ ನಾಡವ, ರಾಮಕ್ಷತ್ರೀಯ ಸಮಾಜಕ್ಕೆ ಸಮಿತಿಯವತಿಯಿಂದ ಸಮಾಜ ಸಂಭ್ರಮದ ಅಂಗವಾಗಿ ಗೌರವ ನೀಡಲಾಯಿತು. ಕ್ರಮವಾಗಿ ಆಯಾ ಸಮಾಜದ ಅಧ್ಯಕ್ಷರಾದ ಸತೀಶ್ ಮೊಗವೀರ, ಶಿವಾನಂದ,ಸುಧೀರ್ ಶೆಟ್ಟಿ, ಗಣೇಶ್ ಗೌರವ ಸ್ವೀಕರಿಸಿದರು. ಶ್ರೀಕ್ಷೇತ್ರ ವರದಹಳ್ಳಿಯ ಅಧ್ಯಕ್ಷರಾದ ಎಂ.ಜಿ. ಕೃಷ್ಣಮೂರ್ತಿಯವರು ಶ್ರೀಶ್ರೀಧರ ಸೇವಾ ಮಂಡಳಿಗೆ ಕೊಡ ಮಾಡಿದ ಗೌರವವನ್ನು ಸ್ವೀಕರಿಸಿದರು. ಹೊಸನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಮತ್ತಿತರರು ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ಬೆಳಗ್ಗೆ ಮಹಾಕಾಳಿ ಹವನ, ಚಂಡೀಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಭಜನೆ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.