ಅಶೋಕೆ: ದೇವರಿಗೆ ಅಮೃತವನ್ನೇ ಊಟ ಮಾಡುವವರು ಎಂಬ ವಿಶೇಷಣವಿದೆ. ಈ ಲೋಕದ ಊಟವನ್ನು ಮಾಡುತ್ತಾ ಹೋದಂತೆ ಸಾಕು ಎನಿಸುತ್ತದೆ. ಆದರೆ ಅಮೃತವನ್ನು ಸವಿದಷ್ಟೂ ಬೇಕು ಎನಿಸುವಷ್ಟು ಸವಿ ಅದು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶ್ರಾವಣ ಶುದ್ಧ ಏಕಾದಶಿಯಂದು (23-08-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಆಹಾರಕ್ಕೂ ಉಪವಾಸಕ್ಕೂ ನಡುವೆ ಅಮೃತಾಹಾರ ಎನ್ನಬಹುದಾದ ಒಂದು ಯೋಗಮಾರ್ಗವಿದ್ದು, ಯೋಗಿಗಳು ಪಾನಮಾಡುವ ಈ ಅಮೃತವು ಅಂಗಡಿಯಲ್ಲಿ ಸಿಗುವಂತಹದ್ದಲ್ಲ ಎಂದರು.
ನಮ್ಮೊಳಗೆ ಚಂದ್ರ ಮಂಡಲ ಹಾಗೂ ಸೂರ್ಯ ಮಂಡಲಗಳಿದ್ದು, ನಾಭಿ ಪ್ರದೇಶದಲ್ಲಿರುವ ಸೂರ್ಯ ಮಂಡಲ ಅಗ್ನಿಯ ಜ್ವಾಲೆಯನ್ನು ಮೇಲ್ಮುಖವಾಗಿ ಹೊರಹೊಮ್ಮಿಸಿದರೆ, ನಾಲಿಗೆಯ ಮೂಲದಲ್ಲಿರುವ ತಾಲು ಪ್ರದೇಶದಲ್ಲಿರುವ ಚಂದ್ರ ಮಂಡಲವು ಅಮೃತವನ್ನು ಸುರಿಸುತ್ತದೆ ಎಂದು ಯೋಗಶಾಸ್ತ್ರದ ಗ್ರಂಥಗಳು ವಿವರಿಸಿವೆ.
ಶಂಕರಾಚಾರ್ಯರ ಯೋಗತಾರಾವಳಿಯಲ್ಲಿಯೂ ಈ ಅಮೃತಪಾನದ ಬಗ್ಗೆ ವಿವರಗಳಿದ್ದು, ಯೋಗಶಾಸ್ತ್ರದಲ್ಲಿ ಜಾಲಂಧರ ಬಂಧ, ವಿಪರೀತ ಕರಣಿಗಳ ಮೂಲಕ ಅಮೃತವನ್ನು ಉಳಿಸಿಕೊಳ್ಳಬಹುದು. ಖೇಚರಿಯ ಮೂಲಕ ಈ ಅಮೃತವನ್ನು ಸವಿಯಬಹುದು. ಗುರಮುಖೇನ ಮಾತ್ರ ಮಾಡಬೇಕಾದ ಇವುಗಳನ್ನು ತಿಳಿದುಕೊಂಡರೆ ಮುಪ್ಪು – ಸಾವುಗಳನ್ನು ಮೀರಬಹುದು ಎಂದು ಯೋಗಸೂಕ್ಷ್ಮಗಳ ಮಾಹಿತಿಯನ್ನು ನೀಡಿದರು.
ಬ್ರಹ್ಮೂರು ಯಕ್ಷಮಿತ್ರ ಬಳಗದಿಂದ ಪ್ರಸಿದ್ಧ ಕಲಾವಿದರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ನಡೆಯಿತು.
ರಾಘವೇಂದ್ರ ಮಧ್ಯಸ್ಥ, ಮಧು ಜಿ.ಕೆ, ಮಹೇಶ್ ಚಟ್ನಹಳ್ಳಿ, ಮಹೇಶ ಎಮ್. ಎನ್, ರಾಜೀವ್ ಭಟ್ ಹಾಗೂ ದಿನಪ್ರಧಾನರಾಗಿ ಸೀತಾರಾಮ ಹೆಗಡೆ ಸುಳಗಾರು ಉಪಸ್ಥಿತರಿದ್ದರು.










