ಕಾರ್ಯಕರ್ತರಲ್ಲಿ ಭಾವ ಭಕ್ತಿ ಇದ್ದಾಗ ಸಂಖ್ಯೆ ಮುಖ್ಯವಾಗುವುದಿಲ್ಲ. ಗುರು ಹಾಗೂ ಶಿಷ್ಯ ಪರಂಪರೆ ಅವಿಚ್ಛಿನ್ನವಾಗಿ ಮುನ್ನಡೆಯಬೇಕು. ಕುಟುಂಬಗಳು ಕ್ಷೀಣಿಸುತ್ತಿದ್ದು, ಇದನ್ನು ತಪ್ಪಿಸಲು ಸಮಷ್ಠಿಯ ಭಾವ ಬರಬೇಕಾಗಿದೆ. ಆತ್ಮ ಬಲ ತುಂಬಿದ ಶಿಷ್ಯರ ತುಲಾಭಾರ ಹೆಚ್ಚು ನಡೆಯಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಗುರುಗಳ ಸುವರ್ಣ ವರ್ಧಂತಿ ವರ್ಷಾಚರಣೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಕ್ಕಳ ಹೃದಯದಲ್ಲಿ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಊರು ಬಿಟ್ಟು, ಎಲ್ಲೋ ಹೋಗಿ ಸಾಧನೆ ಮಾಡಿ ಪ್ರಯೋಜನವಿಲ್ಲ. ಮನೆ, ಊರು ಶೂನ್ಯವಾಗುವುದರಿಂದ ಆಚರಣೆ, ಸಂಪ್ರದಾಯಗಳು ಮುಂದುವರಿಯುವುದಿಲ್ಲ. ಸಮಾಜ ಬೆಳೆಯಬೇಕೆಂಬ ಚಿಂತನೆ ಪ್ರತಿಯೊಬ್ಬರಿಗೆ ಇರಬೇಕು ಎಂದರು.
ಸುವರ್ಣ ವರ್ಧಂತಿ ವರ್ಷಾಚರಣೆ ಅಂಗವಾಗಿ ರುದ್ರ ಹವನ ಮತ್ತು ನವಚಂಡಿ ಹವನ, ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ, ಶ್ರೀಕರಾರ್ಚಿತ ದೇವರ ಸಹಿತ ಶ್ರೀಸಂಸ್ಥಾನದವರಿಗೆ ನಾಣ್ಯ ತುಲಾಭಾರ ನಡೆಯಿತು.
ಹವ್ಯಕ ಮಹಾಮಂಡಲ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃ ಪ್ರಧಾನೆ ದೇವಿಕಾ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ರಮೇಶ್ ಭಟ್, ಉಪ್ಪಿನಂಗಡಿ ಮಂಡಲ ಅರವಿಂದ ದರ್ಬೆ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು.