ಅಶೋಕೆ: ಅತಿ ಉಷ್ಣ ಹಾಗೂ ಅತಿ ಶೀತ ಜಲ ಎರಡನ್ನೂ ಸೇವಿಸಬಾರದು ಎಂದು ಆಯುರ್ವೇದದಲ್ಲಿ ಉಲ್ಲೇಖಿತವಾಗಿದೆ. ದೇಹದಲ್ಲಿ ಒಂದೇ ಬಾರಿಗೆ ಶೀತ ಅಥವಾ ಉಷ್ಣಗಳು ಬದಲಾದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ದೇಹದಲ್ಲಿ ತಂಪಾಗಲಿ, ಉಷ್ಣವಾಗಲಿ ಹಂತಹಂತವಾಗಿ ಬದಲಾಗಬೇಕು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುದ್ಧ ಪಾಡ್ಯದಂದು (12-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ನಾವಿಂದು ತತ್ಕ್ಷಣಕ್ಕೆ ಹಾಯೆನಿಸುತ್ತದೆ ಎಂದು ನೀರನ್ನು ತಂಪಿನ ಪೆಟ್ಟಿಗೆ (ಫ್ರಿಡ್ಜ್) ಯಲ್ಲಿ ಇಟ್ಟು ಅತೀ ಶೀತ ನೀರನ್ನು ಸೇವಿಸುವ ಪರಿಪಾಠವನ್ನು ಬೆಳಸಿಕೊಂಡಿದ್ದೇವೆ. ಅದು ದೇಹಕ್ಕೆ ಹಾಳು ಎಂದು ಆಯುರ್ವೇದವೂ ಸೂಚಿಸಿದೆ ಮತ್ತು ಆಧುನಿಕ ವಿಜ್ಞಾನವೂ ಹೇಳಿದೆ. ಆಯುರ್ವೇದದ ಪ್ರಕಾರ ಅತಿ ಶೀತ ನೀರು ಜೀರ್ಣಕ್ಕೆ ಭಾರ, ಜೀರ್ಣಾಗ್ನಿಯನ್ನು ಹಾಳುಮಾಡುತ್ತದೆ, ವಾತ ಹಾಗೂ ಕಫಗಳನ್ನು ವಿಕಾರಗೊಳಿಸುತ್ತದೆ, ವಿವಿಧ ರೋಗಗಳಿಗೆ ಕಾರಣವಾಗುತ್ತದೆ ಎನ್ನಲಾಗಿದ್ದು, ಇಂದಿನ ವಿಜ್ಞಾನವೂ ರೋಗ ಹಾಗೂ ರಕ್ತನಾಳಗಳ ಸಂಕುಚಿತವನ್ನು ಹೇಳಿದೆ ಎಂದು ಎಚ್ಚರಿಸಿದರು.
ಋತುಗಳಿಗೆ ಅನುಗುಣವಾಗಿ ಬೇರೆಬೇರೆ ರೀತಿಯಲ್ಲಿ ಕಾದಾರಿದ ನೀರನ್ನು ತಯಾರಿಸಿ ಕುಡಿಯುವ ವಿಧಾನಗಳನ್ನೂ ಆಯುರ್ವೇದ ಸೂಚಿಸಿದ್ದು, ನೀರನ್ನು ತಂಪಾಗಿಸುವ ಏಳು ವಿಧಾನಗಳನ್ನೂ ಹೇಳಿದೆ. ವಿವಿಧ ಹೂವುಗಳನ್ನು ನೀರಿಗೆ ಹಾಕಿಕೊಂಡು ಸುಗಂಧ ಭರಿತವಾದ ನೀರನ್ನು ಸೇವಿಸುವ ಕುರಿತಾಗಿಯೂ ಮಾಹಿತಿಗಳಿದ್ದು, ಚಿನ್ನ, ಬೆಳ್ಳಿ, ತಾಮ್ರ, ಗಾಜು, ಮಣ್ಣು ಮುಂತಾದ ಉತ್ತಮ ಪಾತ್ರೆಗಳಲ್ಲಿ ನೀರನ್ನು ಸೇವಿಸಬೇಕು. ಇಂದಿನ ಸ್ಟೀಲ್ ಲೋಟಗಳು ನೀರನ ಸೇವನೆಗೆ ವರ್ಜ್ಯ ಎಂದು ವಿವರಿಸಿದರು.
**
ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಕುಟುಂಬದವರು ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಹವ್ಯಕ ಮಂಡಲದ ಪರವಾಗಿ ಕೇಶವ ಭಟ್ ಸರ್ಪಂಗಳ ಕುಟುಂಬದವರು ಭಿಕ್ಷಾಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಶಿವರಾಮ ಭಟ್ಟ ಬುರ್ಡೆ ದಂಪತಿಗಳು ಉಪಸ್ಥಿತರಿದ್ದರು.
ನವರಾತ್ರಿ ಆಹ್ವಾನ ಪತ್ರಿಕೆ ಲೋಕಾರ್ಪಣೆ
ಈ ವರ್ಷದ ನವರಾತ್ರಿಯ ಕಾರ್ಯಕ್ರಮಗಳು ಬೆಂಗಳೂರಿನ ಗಿನರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿದ್ದು, ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ‘ನವರಾತ್ರ ನಮಸ್ಯಾ’ ಎಂಬ ಹೆಸರಿನೊಂದಿಗೆ ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೧ ರವರೆಗೆ ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ ಸಂಪನ್ನವಾಗಲಿದೆ. ದೇವಿಯ ಆರಾಧನೆಯ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಪೂಜ್ಯ ಶ್ರೀಗಳು ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ. ಎಲ್, ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ರಮೇಶ್ ಹೆಗಡೆ ಕೋರಮಂಗಲ, ವಾದಿರಾಜ ಸಾಮಗ, ತಿಮ್ಮಪ್ಪ ಗುಡ್ದೆದಿಂಬ ಉಪಸ್ಥಿತರಿದ್ದರು.






















