ಹನೂರು: ಭಾರತೀಯ ತಳಿಯ ಗೋವುಗಳ ಸಂರಕ್ಷಣೆ ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಗೋದಾನ ಸತ್ರ’ ಕಾರ್ಯಕ್ರಮದ ಮೂರನೇ ಹಂತದಲ್ಲಿ, ಹನೂರು ತಾಲ್ಲೂಕಿನ ಕೌದಳ್ಳಿ ಗೋಶಾಲೆಯಲ್ಲಿ ಆಷಾಢ ಶುಕ್ಲ ದ್ವಾದಶಿಯಂದು (ಜು. ೨೬) ನಡೆದ ಸಮಾರಂಭದಲ್ಲಿ 24 ಅರ್ಹ ಫಲಾನುಭವಿಗಳಿಗೆ ತಲಾ ಜೋಡಿಯಂತೆ ಒಟ್ಟು 48 ಭಾರತೀಯ ತಳಿಯ ಗೋವುಗಳನ್ನು ಉಚಿತವಾಗಿ ವಿತರಿಸಲಾಯಿತು.


ಮೂಡಿಗೆರೆ ತಾಲ್ಲೂಕಿನ ಬಿಳಗಲಿಯ ಬಿ.ಎಲ್. ಸಂದೀಪ್ ಅವರ ಸಹಯೋಗದೊಂದಿಗೆ ಶ್ರೀರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗೋಫಲ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಾಲಸುಬ್ರಹ್ಮಣ್ಯ ಭಟ್ ಅವರು, ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾಗಳೊಂದಿಗೆ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಭಾರತೀಯ ತಳಿಯ ಗೋವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯೊಂದಿಗೆ, ಗ್ರಾಮೀಣ ಕುಟುಂಬಗಳಲ್ಲಿ ಸಾಂಪ್ರದಾಯಿಕ ಪಶುಪಾಲನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮೂರನೇ ಹಂತದ ಭಾಗವಾಗಿ, ಪೆದ್ದನಪಾಳ್ಯ, ಸುಳೆಕೊಬ್ಬೆ, ಕೊಪ್ಪ, ಕೌದಳ್ಳಿ ಮತ್ತು ಶೆಟ್ಟಹಳ್ಳಿ ಗ್ರಾಮಗಳ ಫಲಾನುಭವಿಗಳಿಗೆ ತಲಾ ಒಂದೊಂದು ಜೋಡಿ ಭಾರತೀಯ ತಳಿಯ ಗೋವುಗಳನ್ನು ನೀಡಲಾಯಿತು. ಒಟ್ಟಾರೆ 24 ಫಲಾನುಭವಿಗಳಿಗೆ 48 ಗೋವುಗಳನ್ನು ವಿತರಿಸಲಾಯಿತು.
ಗೋಫಲ ಟ್ರಸ್ಟ್ನ ಘಟಕ ಉಸ್ತುವಾರಿ ಕುಮಾರ್ ಅವರು ಮಾತನಾಡಿ, ಗೋ ದಾನ ಸತ್ರದ ಮೊದಲ ಎರಡು ಹಂತಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇನ್ನಷ್ಟು ರೈತರು ಮತ್ತು ಗೋಶಾಲೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಉದ್ದೇಶದಿಂದ ಮೂರನೇ ಹಂತವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯ ತಳಿಯ ಗೋವುಗಳ ಮಹತ್ತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಸುಸ್ಥಿರ ಪಶುಪಾಲನೆಯನ್ನು ಉತ್ತೇಜಿಸುವುದು ಟ್ರಸ್ಟ್ನ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ಮಠದ ಹಿರಿಯ ಪದಾಧಿಕಾರಿ ವಿಷ್ಣುಮೂರ್ತಿ ಅವರು ಸೇರಿದಂತೆ ರೋಹಿತ್, ಮುತ್ತಯ್ಯ, ಡಾನ್ ಬಾಸ್ಕೊ, ನಾಗರಾಜು ಮತ್ತು ಇತರ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

