ಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಇತರೆ

 

ಸಾಗರ: ಇನ್ನೊಬ್ಬರ ಕಷ್ಟ ನೋಡಿ ಖುಷಿ ಪಡುವ ವರ್ಗ ಒಂದಾದರೆ ಇನ್ನೊಬ್ಬರಿಗೆ ತಾವೇ ಕಷ್ಟ ಕೊಟ್ಟು ಖುಷಿ ಪಡುವ ವರ್ಗ ಇನ್ನೊಂದು ಈ ಎರಡೂ ವರ್ಗದವರು ದುರ್ಜನರು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಸಾಗರದ ಶ್ರೀರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ವಿಜಯದಶಮಿ ವಿಶೇಷದೊಂದಿಗೆ ನವರಾತ್ರ ನಮಸ್ಯಾದ 11 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.

ಕಷ್ಟ ನೋಡಿ ಖುಷಿ ಪಡುವ ವರ್ಗ ನರಾಧಮರಾದರೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು ಎಂದ ಅವರು, ಅಂತಹ ರಕ್ಕಸ ಪ್ರವೃತ್ತಿ ಇರುವವರಿಂದ ಸಮಾಜಕ್ಕೆ ಅತಿ ದೊಡ್ಡ ಕಂಟಕ. ಇನ್ನೊಬ್ಬರ ನೋವು ಯಾರಿಗೂ ಅರ್ಥವಾಗುವುದಿಲ್ಲ ಆದರೆ ತಮಗೆ ನೋವು ಬಂದಾಗ ಮಾತ್ರ ನೋವಿನ ವೇದನೆ ಅರ್ಥವಾಗಲಿದೆ, ಎಲ್ಲ ರೀತಿಯ ದುರ್ಜನರಿಗೂ ಅಂತಿಮವಾಗಿ ನೋವಿನ ಸ್ಥಿತಿ ಬಂದೇ ಬರಲಿದೆ ಎಂದ ಅವರು ಇನ್ನೊಬ್ಬರಿಗೆ ಕಷ್ಟ ಕೊಟ್ಟವರು ಯಾವುದೇ ಕಾರಣಕ್ಕೂ ಕೊನೆಯಲ್ಲಿ ನೋವು ಅನುಭವಿಸಲೇ ಬೇಕು ಅದೇ ರೀತಿ ಜಗಕ್ಕೆ ಕಂಟಕನಾಗಿ ಮೆರೆದ ಭಂಡಾಸುರನಿಗೆ ಇಂತಹದ್ದೆ ಪರಿಸ್ಥಿತಿ ದೇವಿಯಿಂದ ಎದುರಾಯಿತು ಎಂದರು.

 

ಇದಕ್ಕೂ ಮುನ್ನ ಬೆಳಗ್ಗೆ ವಿಜಯದಶಮಿ ಆಚರಣೆ,ನವಚಂಡಿಕಾ ಹವನ, ಶಮೀಪೂಜೆ ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ರಾತ್ರಿ ದುರ್ಗಾದೀಪ ನಮಸ್ಕಾರ, ಲಲಿತಾಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.


*108 ಶಂಖನಾದ – 108 ಮುತ್ತಿನ ಆರತಿಯೊಂದಿಗೆ ಸ್ವರ್ಣಪಾದುಕಾ ಸಂಚಾರಕ್ಕೆ ಚಾಲನೆ*

ವಿಜಯ ದಶಮಿಯ ಶುಭಾವಸರದಲ್ಲಿ ರಾಜ್ಯ ಹೊರರಾಜ್ಯ ವ್ಯಾಪ್ತಿಯಲ್ಲಿ ಶಿಷ್ಯ ಹಿತಕ್ಕಾಗಿ ಶ್ರೀಮಠದಿಂದ ಪ್ರತಿ ಶಿಷ್ಯಭಕ್ತರ ಮನೆಮನೆಗೆ ತೆರಳಿ ಪೂಜೆಕೈಗೊಳ್ಳಲಿರುವ ಸುವರ್ಣ ಪಾದುಕ ಸಂಚಾರಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಲಾಯಿತು. ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ 108 ಶಂಖನಾದ ಹಾಗೂ 108 ಮುತ್ತಿನಾರತಿಯನ್ನು ಬೆಳಗಿ ಮಠದ ಶಾಸನತಂತ್ರದ ಪ್ರಮುಖರು ಮಹಾಮಂಡಲದ ಪ್ರಮುಖರ ಹೆಗಲಿಗೆ ಸಂಚಾರ ಪಾದುಕೆಯ ಪಲ್ಲಕ್ಕಿ ಹಸ್ತಾಂತರಿಸಿದರು.
ಈ ವೇಳೆ ಶಿಷ್ಯಹಿತಂ ಪ್ರಮುಖ ವೈ.ವಿ.ಕೃಷ್ಣಮೂರ್ತಿ, ಆಚಾರವಿಚಾರ ಗಜಾನನ ಭಟ್ಟ, ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಶಾಂತರಾಮಹಿರೇಮನೆ, ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ ಮತ್ತಿತರರು ಇದ್ದರು.


ಇನ್ನು ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ವೈಭವದ ತೆರೆ ಬಿದ್ದಿದೆ. ಲಲಿತಾಮೂರ್ತಿಯನ್ನು ಮಂಗಲ ವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಹೊತ್ತು ತಂದು ಸಂಬ್ರಮದಿಂದ ಇಲ್ಲಿನ ಗಣಪತಿ ಕೆರೆಯಲ್ಲಿ ವಿಸರ್ಜಿಸಲಾಯಿತು.

 

-ರಮೇಶ್ ಹೆಗಡೆ ಗುಂಡೂಮನೆ

Leave a Reply

Your email address will not be published. Required fields are marked *