|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

2019-20ನೆಯ ಸಾಲಿನಿಂದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ; ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶ

ಬಸರೀಕಟ್ಟೆ: ಮಲೆನಾಡಿನ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ, ಸದಾ ಹಸಿರಿನಿಂದ ಕೂಡಿ ರಮಣೀಯ ಪ್ರಾಕೃತಿಕ ಸೊಬಗನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ಸುಮಾರು ಹದಿನೆಂಟು ವರ್ಷಗಳಿಂದ ಶ್ರೀ ಸದ್ಗುರು ವಿದ್ಯಾನಿಕೇತನ ವಿಶ್ವಸ್ಥ ಮಂಡಳಿ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿ ನಿಲಯವು ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯವಾಗಿ ಅತ್ಯುತ್ತಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿದ್ದು ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವೇದ ಮಂತ್ರ, ಯೋಗ, ಸಂಗೀತ, ಭಜನೆ, ನೀತಿ ಪಾಠ ಮುಂತಾದವುಗಳನ್ನು ಬೋಧಿಸುವುದು ಈ ವಿದ್ಯಾನಿಕೇತನದ ಉದ್ದೇಶವಾಗಿದೆ.

 

ಇಲ್ಲಿನ ಶಾಲೆಗಳಲ್ಲಿ ಹಾಗೂ ವಿದ್ಯಾ ನಿಕೇತನದಲ್ಲಿ ಇದುವರೆಗೆ ಓದಿರುವ ಬಹುತೇಕ ಮಕ್ಕಳೆಲ್ಲರೂ ಅತ್ಯಂತ ಸುಸಂಸ್ಕೃತರಾಗಿ ಜೀವನ ರೂಪಿಸಿ ಕೊಂಡಿರುವುದು ಹೆಮ್ಮೆಯ ವಿಷಯವೇ ಆಗಿದೆ. ಮಕ್ಕಳ ಪಠ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಎಲ್ಲ ವಿಷಯಗಳಿಗೂ ವಿದ್ಯಾನಿಕೇತನದಲ್ಲಿ ಅಧ್ಯಾಪಕರು ಲಭ್ಯವಿರುತ್ತಾರೆ. ಅತ್ಯುತ್ತಮ ಶುಚಿ ರುಚಿಯಾದ ಊಟ-ತಿಂಡಿಯ ವ್ಯವಸ್ಥೆ, ವಾಸ್ತವ್ಯಕ್ಕೆ ಮತ್ತು ಅಧ್ಯಯನ ಮಾಡಲು ಸುಸಜ್ಜಿತ ಕಟ್ಟಡದ ವ್ಯವಸ್ಥೆ ಇರುತ್ತದೆ. ವಿದ್ಯುತ್ ಕೊರತೆಯಾಗದಂತೆ ಜನರೇಟರ್ ವ್ಯವಸ್ಥೆಯಿದೆ. ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ ವಿಶ್ವಾಸಗಳಿಂದ ನೋಡಿಕೊಳ್ಳುವ ಹಾಗೂ ಶಿಸ್ತನ್ನು ಯಥೋಚಿತವಾಗಿ ಕಾಪಾಡಿಕೊಂಡು ಬರುತ್ತಿರುವ ಯೋಗ್ಯ ಸಿಬ್ಬಂದಿಗಳಿದ್ದಾರೆ. 6ನೆಯ ತರಗತಿಯಿಂದ 10ನೆಯ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿನಿಲಯದಲ್ಲಿ ಅವಕಾಶ ಕಲ್ಪಿಸಲಾಗುವುದು.

 

2019-20ನೆಯ ಸಾಲಿನಿಂದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸದೆ, ಈ ವಿದ್ಯಾರ್ಥಿನಿಲಯವನ್ನು ಸಂಪೂರ್ಣ ಉಚಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಮಕ್ಕಳಲ್ಲಿ ಬಿತ್ತುವುದು ವಿದ್ಯಾರ್ಥಿನಿಲಯದ ಮುಖ್ಯ ಉದ್ದೇಶವಾಗಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

 

ತ್ರಿಮತಸ್ಥ ವ್ಯಾಪ್ತಿಗೆ ಒಳಪಡುವ ಆಸಕ್ತ ವಿದ್ಯಾರ್ಥಿ ಪೋಷಕರು ವಿದ್ಯಾರ್ಥಿನಿಲಯದ ಹಾಗೂ ಶಾಲೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಶ್ರೀ ಕೆ ವಿ ವಿಜಯರಂಗ : 9448964366
ಶ್ರೀಮತಿ ಚಂಚಲಾ: 9448945943