ಬದಿಯಡ್ಕ: ನಿಜ ಜ್ಯೇಷ್ಠ ಕೃಷ್ಣ ಪಂಚಮಿಯಂದು (05-07-2026) ಶ್ರೀಭಾರತೀ ವಿದ್ಯಾಪೀಠಕ್ಕೆ ಪರಮಪೂಜ್ಯ ಶ್ರೀಸಂಸ್ಥಾನದವರು ಪಾದಬೆಳೆಸಿದ ಪುಣ್ಯಸಂದರ್ಭ. ಪರಮಪೂಜ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಲಾಯಿತು. ಷಷ್ಠಿಯಂದು ಶಾಲೆಯ ವತಿಯಿಂದ ಶ್ರೀಗುರುಭಿಕ್ಷಾಸೇವೆ ನಡೆಯಿತು. ಶಾಲಾ ನಿರ್ದೇಶಕ ಜಯಪ್ರಕಾಶ ಪಜಿಲ ದಂಪತಿಗಳು ಶ್ರೀಗುರುಭಿಕ್ಷಾಸೇವೆ ನೆರವೇರಿಸಿದರು.


ಇತ್ತೀಚೆಗೆ ಉದ್ಘಾಟನೆಗೊಂಡ ಮಕ್ಕಳ ನಿತ್ಯಭೋಜನ ವ್ಯವಸ್ಥೆಗೆ ಅನುಕೂಲಕರ ಸೌಕರ್ಯಗಳನ್ನೊಳಗೊಂಡ ‘ಅನ್ನಮಯೀ’ ಕಟ್ಟಡವನ್ನು ಪರಮಪೂಜ್ಯರು ವೀಕ್ಷಿಸಿ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಶಾಲಾ ಕಟ್ಟಡಗಳನ್ನು ವೀಕ್ಷಿಸಿ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಶೀರ್ವದಿಸಿದರು. ಶಾಲೆಯ ಮುಂದಿನ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನವನ್ನಿತ್ತರು.