ಸಂಸ್ಕೃತ ಭಾಷೆಯಲ್ಲಿರುವ ಸೊಗಸು ಬೇರಾವ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ – ಶ್ರೀಸಂಸ್ಥಾನ

ಮಠ

ವೇದ ಮತ್ತು ದೇವ ಎನ್ನುವುದು ನಾಣ್ಯದ ಎರಡು ಮುಖಗಳಾಗಿದೆ. ದೇವನು ರಾಮನಾಗಿ ಬಂದರೆ, ವೇದವು ರಾಮಾಯಣವಾಗಿ ಬಂದಿದೆ. ರಾಮಾಯಣವೂ ಒಂದು ಅವತಾರವಾಗಿದ್ದು, ಅದು ಮರೆಯಾಗ ಅವತಾರವಾಗಿದೆ. ವೇದಗಳೆಂಬುದು ಕಠಿಣವಾಗಿದ್ದು, ರಾಮಾಯಣದಲ್ಲಿ ಕಥೆ, ರಸ, ತತ್ವ ಸೇರಿ ಜೀವನಕ್ಕೆ ಬೇಕಾದ ಸಂದೇಶವಿದೆ. ಸಂಸ್ಕೃತ ಭಾಷೆಯಲ್ಲಿರುವ ಸೊಗಸು ಬೇರಾವ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯಪಟ್ಟಾಭಿಷೇಕ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ರಾಮ ಹಾಗೂ ರಾಮಾಯಣದಿಂದ ದೂರ ಬಂದ ಕಾರಣ ದುರಾವಸ್ಥೆಗಳು ಬಂದಿದೊದಗಿದೆ. ಸಂಸ್ಕೃತಿಯಲ್ಲಿ ಬಹುತೇಕ ಸಂಗತಿಗಳು ರಾಮಾಯಣದ ಕೊಡುಗೆಯಾಗಿದೆ. ಕ್ಲೇಶದಿಂದ ಮುಕ್ತಿ ನೀಡಿ ಸುಖದತ್ತ ಕೊಂಡೊಯ್ಯುವ ಮಹಾ ಶಕ್ತಿಯನ್ನು ರಾಮಾಯಣ ಹೊಂದಿದೆ. ರಾಮನ ಶಬ್ದಮಯವಾದ ರೂಪ ರಾಮಾಯಣ, ರಾಮಾಯಣದ ಜ್ಯೋತಿರ್ಮಯವಾದ ರೂಪ ರಾಮ. ಪರತತ್ವವು ರಾಮನಾಗಿ ಅವತರಿಸಿದರೆ, ಅದನ್ನು ಪ್ರತಿಪಾಧನೆ ಮಾಡುವ ವೇದಗಳು ರಾಮಾಯಣವಾಗಿ ಅವತರಿಸಿದವು. ರಾಮಾಯಣ ಪಾರಾಯಣದಿಂದ ಜೀವನದ ಕೊರತೆಗಳನ್ನು ನೀಗಿಸಲು ಸಾಧ್ಯ ಎಂದರು.

ಬದುಕಿಗೆ ಸ್ಪೂರ್ಥಿಯನ್ನು ನೀಡುವ ಶಿಕ್ಷಣ ಕಾವ್ಯ ವಾಲ್ಮೀಕಿ ರಾಮಾಯಣವಾಗಿದೆ. ಭಾರತದ ಆಧುನಿಕ ವಿದ್ಯಾಸಂಸ್ಥೆ ಸೇರಿ ಎಲ್ಲಾ ಕಡೆಗಳಲ್ಲಿ ಮೂಲ ವಾಲ್ಮೀಕಿ ರಾಮಾಯಣ ಪಠ್ಯವಲ್ಲದೇ ಇರುವುದು ದುರ್ದೈವವಾಗಿದೆ. ಭಾರತದಿಂದ ರಾಮಾಯಣವನ್ನು ತೆಗೆದರೆ, ಮಂಜಿನಿಂದ ನೀರನ್ನು ತೆಗೆದ ಹಾಗಾಗುತ್ತದೆ. ಮೂಲ ರಾಮಾಯಣವನ್ನು ಕಡ್ಡಾಯ ಪಠ್ಯವಾಗಿಸಿದಾಗ ಭಾರತೀಯ ಸಂಸ್ಕೃತಿಯನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

೨೪ಸಾವಿರ ಶ್ಲೋಕಗಳ ರಾಮಾಯಣ ರಾಮನ ಇನ್ನೊಂದು ರೂಪವಾಗಿದೆ. ವಾಲ್ಮೀಕಿಗಳು ವೇದವನ್ನು ಹಾಗೂ ವಿಶ್ವವನ್ನು ಅರ್ಥಮಾಡಿಕೊಂಡು ಹಾಲಿನ ಹಾಗೆ ರಾಮಯಣವನ್ನು ನೀಡಿದ್ದಾರೆ. ಬದುಕಿಗೆ ಬೇಕಾದ ಸಮಸ್ತ ಸಂಗತಿಗಳನ್ನೊಳಗೊಂಡ ರಾಮಾಯಣ ಎಂಬ ಜೇನನ್ನು ಪ್ರತಿನಿತ್ಯ ಸೇವನೆ ಮಾಡಬೇಕು. ಪಟ್ಟಾಭಿಷೇಕ ಎಂಬುದು ನಿತ್ಯ ರಾಮಾಯಣ ಪಾರಾಯಣದ ಅಂಗವಾಗಿದೆ. ಕ್ಲೇಶದಿಂದ ಮುಕ್ತಿಗೊಳಿಸುವ ಶಕ್ತಿಯನ್ನು ರಾಮಯಣ ಹೊಂದಿದೆ. ಪೂರ್ಣ ಮಂಡಲ ವರ್ಷದಲ್ಲಿರುವ ಮಾಣಿಯ ಕಡೆಗೆ ರಾಮನ ದೃಷ್ಟಿ ಬಿದ್ದಿದೆ ಎಂದು ಹೇಳಿದರು.

ಪಟ್ಟಾಭಿಷೇಕ ಕಾರ್ಯಕ್ರಮ:
ವಿಶಿಷ್ಟವಾಗಿ ಅಲಂಕೃತವಾದ ರಜತ ಮಂಟಪದಲ್ಲಿ ಪಟ್ಟಾಭಿಷಿಕ್ತನಾದ ಶ್ರೀರಾಮ ಹಾಗೂ ಸೀತಾಮಾತೆಗೆ ಶ್ರೀಗಳು ನವರತ್ನಾಭಿಷೇಕ, ಸುವರ್ಣಾಭಿಷೇಕ, ರಜತಾಭಿಷೇಕ, ರಜತಗಂಗಾತೀರ್ಥ ಕಲಶ, ಗಂಗಾತೀರ್ಥ ಕಲಶಾಭಿಷೇಕ ನೆರವೇರಿಸಿದರು. ಶ್ರೀಕರಗಳಿಂದ ಕಿರೀಟಧಾರಣೆ ಮೂಲಕ ಪಟ್ಟಾಭಿಷೇಕ ಕಾರ್ಯ ನಡೆಯಿತು. ಶಾಸನತಂತ್ರದ ಪದಾಧಿಕಾರಿಗಳು ಶ್ರೀರಾಮನಿಗೆ ಕಪ್ಪಕಾಣಿಕೆ ಸಲ್ಲಿಸಿದರು. ಶ್ರೀಮಠದ ಶಿಷ್ಯಭಕ್ತರು ಅಮೂಲ್ಯ ನವರತ್ನ, ಆಭರಣ ಸೇರಿ ವಿವಿಧ ಸುವಸ್ತುಗಳನ್ನು ಹಾಗೂ ಕಾಣಿಕೆ ಸಮರ್ಪಿಸಿದರು. ಪಟ್ಟಾಭಿಷೇಕ ಸಂದರ್ಭದಲ್ಲಿ ಸಂಗೀತ ಸೇವೆ, ನೃತ್ಯಸೇವೆ, ಋಗ್ವೇದ, ಯಜುರ್ವೇದ, ಸಾಮವೇದ, ಅರ್ಥವೇದ ಮಂತ್ರಘೋಷ ಹಾಗೂ ಅಷ್ಟಾವಧಾನ ಸೇವೆ ನೆರವೇರಿತು.

Author Details


Srimukha

Leave a Reply

Your email address will not be published. Required fields are marked *