ಮಂಗಳೂರು: ‘ಶ್ರೀಶಂಕರಾಚಾರ್ಯರು ಪ್ರಪಂಚಕ್ಕೇ ಶ್ರೇಷ್ಠರು. ಅವರ ಆದರ್ಶ, ತತ್ತ್ವಗಳು ಸಾರ್ವಕಾಲಿಕ. ಜಾತಿ, ಮತ, ಬೇಧವಿಲ್ಲದೇ ಸರ್ವರನ್ನೂ ಒಂದುಗೂಡಿಸಿದ ಮಹಾತ್ಮರು. ಅವರನ್ನು ನೆನಪಿಸಿಕೊಂಡು, ಅನುಸರಿಸುವುದು ಅತ್ಯಂತ ಅವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹವ್ಯಕ ಮಂಡಲ ಸಹಯೋಗದೊಂದಿಗೆ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ವೈಶಾಖ ಶುಕ್ಲ ಪಂಚಮಿಯಂದು (21-04-2026) ನಡೆದ ಶ್ರೀಶಂಕರಾಚಾರ್ಯ ಜಯಂತಿ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೊ ಮಾತನಾಡಿ ‘ಶ್ರೀಶಂಕರಾಚಾರ್ಯರ ಸಾಧನೆ-ಆದರ್ಶ-ಮಾಹಿತಿ ತಲುಪಲು ಅರ್ಹವಾದ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರದಿಂದ ಶ್ರೀಶಂಕರಾಚಾರ್ಯ ಜಯಂತಿ ಆಚರಿಸುತ್ತಿರುವುದು ಸೂಕ್ತವಾಗಿದೆ’ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್. ಗಟ್ಟಿ ಮಾತನಾಡಿ ‘ಗುರುಕುಲ ಮಾದರಿಯಲ್ಲಿ ವೇದಾಧ್ಯಯನ ನಡೆಯುತ್ತಿರುವ ಸ್ಥಳದಲ್ಲಿ ಶ್ರೀಶಂಕರಾಚಾರ್ಯರ ಮಹತ್ತ್ವವನ್ನು ಸಾರಲಾಗಿದೆ. ಅವರ ಆದರ್ಶ-ತತ್ತ್ವಗಳನ್ನು ಅನುಸರಿಸಲು ಮಕ್ಕಳಿಗೆ ಯೋಗ್ಯ ಮಾಹಿತಿ ಲಭ್ಯವಾಯಿತು’ ಎಂದು ಹೇಳಿದರು.
ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಮಂಗಳೂರು ಮಧ್ಯ ಹವ್ಯಕ ವಲಯಾಧ್ಯಕ್ಷ ಅನಂತಸುಬ್ರಹ್ಮಣ್ಯ ಶರ್ಮ ಉಪನ್ಯಾಸ ನೀಡಿದರು.