ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಜೂ.6 ಮತ್ತು 7 ರಂದು ಹಲಸುಮೇಳ- ಆಹಾರೋತ್ಸವ ಆಯೋಜಿಸಲಾಗಿದೆ.
ಆಹಾರೋತ್ಸವದಲ್ಲಿ ಹಲಸಿನ ವಿವಿಧ ಖಾದ್ಯಗಳನ್ನು ಆಸ್ವಾದಿಸಬಹುದು. ಹಲಸಷ್ಟೇ ಅಲ್ಲದೆ, ಮಾವಿನ ಹಣ್ಣಿನ ಪ್ರಿಯರಿಗಾಗಿ ಮಲ್ಲಿಕಾ – ಅಲ್ಫೋನ್ಸ್ – ದಶ್ಹೇರಿ ಸೇರಿದಂತೆ ವಿವಿಧ ತಳಿಯ ಉತ್ಕೃಷ್ಟ ಗುಣಮಟ್ಟದ ಮಾವಿನಹಣ್ಣುಗಳು ಲಭ್ಯವಿರಲಿವೆ. ಇವುಗಳ ಜೊತೆಗೆ, ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಮಲೆನಾಡಿನ ತಾಜಾ ತರಕಾರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬಿಸಿಬಿಸಿ – ಬಗೆಬಗೆ
ಆಹಾರ ಪ್ರಿಯರಿಗಾಗಿ ಮೇಳದ ಆವರಣದಲ್ಲೇ ಬಿಸಿಬಿಸಿಯಾದ ಹಲಸಿನಕಾಯಿ ದೋಸೆ, ಬೋಂಡಾ, ಪೋಡಿ, ಉಪ್ಪುಸೊಳೆ ರೊಟ್ಟಿ, ಗುಳಿ ಅಪ್ಪ, ರಸಾಯನ, ಗುಜ್ಜೆ ಮಂಚೂರಿ, ಹಲಸಿನಹಣ್ಣಿನ ಪಾಯಸ, ಬೆರಟಿ ಪಾಯಸ, ಹಾಗೂ ಹಲಸಿನ ಹಣ್ಣಿನ ಜಿಲೇಬಿ ಸೇರಿದಂತೆ ಹತ್ತಾರು ಬಗೆಯ ತಿಂಡಿ-ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ನೀಡಲಾಗುತ್ತದೆ. ಸಾರ್ವಜನಿಕರ ಆರೋಗ್ಯ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಎಲ್ಲ ಆಹಾರ ಪದಾರ್ಥಗಳ ತಯಾರಿಕೆಗೆ ಕೇವಲ ತೆಂಗಿನೆಣ್ಣೆಯನ್ನು ಮಾತ್ರ ಬಳಸುತ್ತಿರುವುದು ಆಹಾರೋತ್ಸವದ ವೈಶಿಷ್ಟ್ಯ. ಅಲ್ಲದೇ ಹಪ್ಪಳ, ಸೋಂಟೆ, ಉಂಡ್ಳಕಾಳು, ಚಿಪ್ಸ್, ಬಾಳೆಹಣ್ಣು ಹಲ್ವ, ಹಲಸಿನಹಣ್ಣಿನ ಹಲ್ವ ಕೂಡಾ ಲಭ್ಯವಿದೆ. ಗುಣಮಟ್ಟಕ್ಕೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆಹಾರ ಮತ್ತು ಕೃಷಿ ಮೇಳಕ್ಕೆ ಪೂರಕವಾಗಿ ಎರಡು ದಿನಗಳ ಕಾಲವೈವಿಧ್ಯದಿಂದ ಒಡಗೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.