ವ್ಯಕ್ತಿಯ ಸಾಧನೆಗೆ ತಾಯಿಯ ಆಶೀರ್ವಾದದ ಬಲ ಬೇಕು: ಜಶೋದಾ ಬೆನ್ ಮೋದಿ

ಇತರೆ ಗೋಶಾಲಾ ಸುದ್ದಿ

ಹೊಸನಗರ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವಾದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದರು.

ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದ ಆವರಣದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ, ಸಹಸ್ರ ಛತ್ರ ಮೆರವಣಿಗೆ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, ಗೋಶಾಲೆ ಲೋಕಾರ್ಪಣೆ, ಗೋ ಆಸ್ಪತ್ರೆ ಉದ್ಘಾಟನೆ, ಗೋ ಮ್ಯೂಸಿಯಂ ಲೋಕಾರ್ಪಣೆಯ ಕೃಷ್ಣಾರ್ಪಣ್ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಅಂದು ಶಂಕರಾಚಾರ್ಯರ ಸಾಧನೆಗಳನ್ನು ಮತ್ತೆ ನೆನಪಿಸುವ ರೀತಿಯಲ್ಲಿ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಶ್ರೀಗಳು ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಅದೇ ಉದ್ದೇಶಕ್ಕೆ ದೂರದ ಗುಜರಾತಿನಿಂದ ಕರ್ನಾಟಕದ ಈ ತುದಿಯವರೆಗೆ ಪಯಣ ಬೆಳೆಸಿದ ನಾವು ಇಲ್ಲಿ ಗೋವರ್ಧನ ಗಿರಿಧಾರಿ ಶ್ರೀ ಕೃಷ್ಣನ ದೇವಾಲಯದ ಸುಂದರ ವಾತಾವರಣದಲ್ಲಿ ಮತ್ತೆ ಶಂಕರಾಚಾರ್ಯರಿಂದ ಆಶೀರ್ವಾದ ಪಡೆಯುತ್ತಿರುವುದು ನಮ್ಮ ಪುಣ್ಯ ವಿಶೇಷ, ನಿಜಕ್ಕೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತರ ನಡುವೆ ವೈಯಕ್ತಿಕವಾದ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಿಸುತ್ತಿರುವ ಈ ಕ್ಷಣ ನನ್ನ ಪಾಲಿಗೆ ಧನ್ಯತೆಯ ಕ್ಷಣ ಎಂದರು.

ದೇಶ ಸುಭಿಕ್ಷೆ ಮತ್ತು ಸಮೃದ್ದಿಯಿಂದ ಇರಬೇಕಾದರೆ ಒಳ್ಳೆಯ ಮನಸ್ಸುಗಳಿಂದ ಇಲ್ಲಿರುವ ದೇವಶಕ್ತಿಗಳಲ್ಲಿ ಪ್ರಾರ್ಥಿಸಬೇಕು ಎಂದ ಅವರು ಸಮಷ್ಠಿಯ ಪ್ರಾರ್ಥನೆಯ ಫಲವಾಗಿ ಇಂದು ರಾಮಮಂದಿರವೂ ನಿರ್ಮಾಣವಾಗುತ್ತಿದೆ ಅದು ದೇಶ ಒಳ್ಳೆಯ ದಾರಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಇದೇ ವೇಳೆ ಇಲ್ಲಿಯ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ರಜತ ಛತ್ರ ಸಮರ್ಪಣೆ ಮೂಲಕ ತಮ್ಮ ವೈಯಕ್ತಿಕ ಹರಕೆಯನ್ನು ತೀರಿಸಿದರು.

ದಿವ್ಯಸಾನ್ನಿಧ್ಯವಹಿಸಿದ್ದ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ತ್ಯಾಗದ ಜೀವನದಿಂದ ಮಾತ್ರ ದೇಶಕ್ಕೆ ಒಳಿತಿದೆ ಎನ್ನುವುದನ್ನು ಕಂಡುಕೊಂಡ ದೇಶ ನಮ್ಮ ಭಾರತ. ಅಂತಹ ಹಿರಿಮೆ ಇರುವ ನಮ್ಮ ದೇಶದಲ್ಲಿ ಪತಿಯ ಸಾಧನೆಯ ಹಿಂದೆ ಪತ್ನಿಯ ಪುಣ್ಯ ಇರುತ್ತದೆ ಎಂಬ ಸತ್ಯವನ್ನು ಯಾರೂ ಮರೆಯುವಂತಿಲ್ಲ ಎಂದರು.

ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದ ಪರಿಸರ ಗೋಸಂರಕ್ಷಣೆಯ ಅಡಿಶಿಲೆ. ಗೋಸ್ವರ್ಗ ಎನ್ನುವುದು ಶಿಖರ. ಅಡಿಶಿಲೆ ಅತ್ಯಂತ ದೃಡವಾಗಿದ್ದಾಗ ಶಿಖರ ಶೋಭಿಸಲಿದೆ ಇದಕ್ಕೆ ಪೂರಕವಾಗಿ ಇಲ್ಲಿ ಜಗತ್ತು ಗುರುತಿಸುವ ರೀತಿಯಲ್ಲಿ 31 ಭಾರತೀಯ ದೇಶೀಯ ಗೋತಳಿಗಳು ಇದೆ. ಇಂದಿನಿಂದ ಈ ಪರಿಸರ ವಿಷ್ಣು ಸಹಸ್ರನಾಮ ಸುಕ್ಷೇತ್ರ ಎನಿಸಿಕೊಂಡಿದೆ. ಇದಕ್ಕೆ ಕಾರಣವಾಗಿರುವವರು ಕೃಷ್ಣನೂ ಹೌದು..ಪಾರ್ಥ ಸಾರಥಿಯೂ ಹೌದು ಎಂದರು.

ಇದೇ ವೇಳೆ ಗೋ ಮ್ಯೂಸಿಯಂಗೆ ಕಾರಣಕರ್ತರಾಗಿರುವ ಕೃಷ್ಣರಾಜ್ ಅರಸ್‍ರವರಿಗೆ ಕೃಷ್ಣಾನುಗ್ರಹ ಪ್ರದಾನ ಮಾಡಲಾಯಿತು.

ವಿಷ್ಣು ಸಹಸ್ರನಾಮ ಪಠಣ ನೇತೃತ್ವವಹಿಸಿದ್ದ ಅರಳುಮಲ್ಲಿಗೆ ಪಾರ್ಥಸಾರಥಿ, ಪಟ್ಟಣಗೆರೆ ಶ್ರೀ ವಿಜಯದುರ್ಗಾ ಪರಮೇಶ್ವರಿ ಶ್ರೀ ಸನ್ನಿಧಾನದ ದಿನೇಶ್ ಗುರೂಜಿ, ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಜಯರಾಂ ಭಟ್, ಉದ್ಯಮಿಗಳಾದ ರಾಘವೇಂದ್ರ, ಜಿ.ಎಂ. ಹೆಗಡೆ, ಜಿ.ವಿ. ಹೆಗಡೆ, ಬಿ. ರವಿ,ಎನ್.ಎಚ್. ಇಲ್ಲೂರು, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಮಹಾನಂದಿ ಗೋಲೋಕದ ಡಾ. ಸೀತಾರಾಮ ಪ್ರಸಾದ್, ಬರುವೆ ಸುಬ್ಬಣ್ಣ ಇದ್ದರು. ರಮೇಶ್ ಹೆಗಡೆ ಗುಂಡೂಮನೆ ನಿರೂಪಿಸಿದರು.

ಅರಳು ಮಲ್ಲಿಗೆ ಪಾರ್ಥಸಾರಥಿಯವರ ಹರಿದಾಸ ಹಾಡುಗಳ ಪುಸ್ತಕವನ್ನು ಇದೇ ವೇಳೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.

Author Details


Srimukha

Leave a Reply

Your email address will not be published. Required fields are marked *