ಬೆಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಗಿಲ್ ಯುದ್ದಧಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರಾಗಿರುವ ಶ್ರೀಧರ್ ಭಟ್ಟ ಬೀಡ್ ಬೈಲ್ ಮಾತನಾಡಿ ಸೈನಿಕರು ದೇಶಕ್ಕಾಗಿ ೨೪ ಗಂಟೆಯೂ ಕೆಲಸ ಮಾಡ್ತಾರೆ. ಕೊರೆವ ಚಳಿ ಹಿಮಪಾತ ಯಾವುದನ್ನೂ ಲೆಕ್ಕಿಸದೇ ದೇಶ ಸೇವೆ ಮಾಡುತ್ತಾರೆ. ಭಾರತೀಯ ಸೇನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡಿಸಿದ ಅವರು ಸೈನಿಕರನ್ನೂ, ದೇಶವನ್ನೂ ಗೌರವಿಸಬೇಕೆಂದು ತಿಳಿಸಿದರು.
ಶ್ರೀಧರ್ ಭಟ್ಟ ಬೀಡ್ ಬೈಲ್ ಅವರನ್ನು ಗೌರವಿಸಲಾಯಿತು. ವಕೀಲ ಗೋವಿಂದ ರಾಜ ಕೋರಿಕ್ಕಾರ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು. ಟಿ. ಜಿ. ಭಟ್ ಸ್ವಾಗತಿಸಿದರು. ಲಲಿತಾ ವಂದಿಸಿದರು.
ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನಿವೃತ್ತ ಯೋಧ ಗೋಪಿನಾಥ್ ರಾವ್ ಬೆಳ್ಳಾಲ ಇವರು ಮಾತನಾಡಿ, ನಮಗೋಸ್ಕರ ಪ್ರಾಣ ಕೊಡುವ ಸೈನಿಕರು ಸಮುದ್ರ ಮಧ್ಯದಲ್ಲಿರುವ ದೀಪ ಸ್ತಂಭಗಳಂತೆ. ಇದೇ ರೀತಿ ನಮ್ಮ ವಿದ್ಯಾರ್ಥಿಗಳು ದೇಶದೆಲ್ಲೆಡೆ ಬೆಳಕನ್ನು ಪಸರಿಸುವ ದೀಪ ಸ್ತಂಭಗಳಾಗಬೇಕು ಎಂದರು.
ದ.ಕ. ಜಿಲ್ಲೆಯ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ಅವರು ಮಾತನಾಡಿ, ನಾವು ಸಾಮಾನ್ಯ ಮನುಷ್ಯರಾಗಿದ್ದುಕೊಂಡು ದೇಶಸೇವೆ ಮಾಡಬೇಕು. ಯೋಧರನ್ನು ಸ್ಮರಿಸುವುದು ನಮ್ಮ ಪ್ರಾಥಮಿಕ ಕರ್ತವ್ಯ ಎಂದರು.
ಹಿರಿಯ ವಿದ್ಯಾರ್ಥಿ ಶ್ರವಣ್ ಕುಮಾರ್, ದೇಶಕ್ಕಾಗಿ ಹುತಾತ್ಮರಾದ ನಂತರವೂ ಅಮರರಾಗುವುದು ಸೈನಿಕರು ಮಾತ್ರ. ಆದ್ದರಿಂದ ನಾವೆಲ್ಲರೂ ದೇಶಸೇವೆಗೆ ಬದ್ಧರಾಗಬೇಕು ಎನ್ನುತ್ತಾ ವಿದ್ಯಾರ್ಥಿಗಳಿಗೆ ಸೈನ್ಯದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನು ನೆನಪಿಟ್ಟುಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಅನಂತರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಮತ್ತು ಜ್ಯೋತಿಯನ್ನು ಬೆಳಗುವುದರ ಮೂಲಕ ಅತಿಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಭಟ್ ಹಾಗೂ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿಯಾಂಕ ಸ್ವಾಗತಿಸಿ, ವಿದ್ಯಾರ್ಥಿ ಕೃಷ್ಣಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಅಂಕಿತಾ ನೀರ್ಪಾಜೆ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಪ್ರಹಸನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.