ಮಂಗಳೂರು: ‘ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುಕ್ತ ಶಿಕ್ಷಣ ನೀಡಿದಾಗ ಪರಿಪೂರ್ಣವಾಗುತ್ತದೆ. ಮಕ್ಕಳಿಗೆ ಶಿಸ್ತು, ಉತ್ತಮ ನಡವಳಿಕೆ, ಜೀವನ ಮೌಲ್ಯ- ಇವುಗಳ ಪಾಠ ಸಿಗಬೇಕು’ ಎಂದು ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.
ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಪಿ.ಯು.ಸಿ ವಿಭಾಗದ ‘ಎ ವೈಬ್ರೆಂಟ್ ಬಿಗಿನಿಂಗ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಣೆಯ ‘ರಾಮ ಕೃಷಿ ರಸಾಯನ ಸಂಸ್ಥೆ’ಯ ಲೆಕ್ಕ ಮತ್ತು ಆರ್ಥಿಕ ಮುಖ್ಯಸ್ಥ ಅರವಿಂದ ರೈ ಅರ್ಪಿಣಿಗುತ್ತು ಅವರು ಮಾತನಾಡಿ ‘ಉತ್ತಮ ವಿದ್ಯಾಸಂಸ್ಥೆಗೆ ಸೇರ್ಪಡೆಗೊಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಹೆತ್ತವರ ಆಶಯವಾಗಿರುತ್ತದೆ. ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಂತಹ ಯೋಗ್ಯ ಶಿಕ್ಷಣ ಲಭ್ಯವಾಗುತ್ತಿದೆ’ ಎಂದು ಹೇಳಿದರು.
ಶ್ರೀಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸಂದೀಪ್ ಆಚಾರ್ಯ, ದೀಪಾ ಅರವಿಂದ ರೈ, ಶ್ರೀ ಭಾರತೀ ಸಮೂಹ ಸಂಸ್ಥೆಯ ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ, ಕಾರ್ಯಾಲಯ ಕಾರ್ಯದರ್ಶಿ ಎಮ್. ಟಿ. ಭಟ್, ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಮತ್ತು ಸಂಗೀತ ಶಿಕ್ಷಕ ವೆಂಕಟಯಶಸ್ವಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ಶ್ರೀರಕ್ಷಾ ಎಮ್., ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 15ನೇ ಸ್ಥಾನ ಪಡೆದ ಶ್ರೀಶಾಂತ್ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಶೇ.95 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.