ಒಮ್ಮೆ ಜನಕ ಮಹಾರಾಜ ಸಾಧು-ಸಂತರು, ವಿದ್ವಾನ್ ಮಣಿಗಳೇ ತುಂಬಿದ್ದ ಒಂದು ಸಭೆಯಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ-
“ಯಾರು ಅತ್ಯಲ್ಪ ಸಮಯದಲ್ಲಿ ನನಗೆ ಆತ್ಮಜ್ಞಾನವನ್ನು ನೀಡಿ ಜೀವನ ಸಾಕ್ಷಾತ್ಕಾರವನ್ನು ಮಾಡಬಲ್ಲಿರಿ?” ಎಂದು.
ಯಾರೂ ಮಾತನಾಡುವುದಿಲ್ಲ.
ಆಗ ಅಷ್ಟಾವಕ್ರನೆಂಬ ಗುರು-
“ನಾನು ಹೇಳಬಲ್ಲೆ, ಆದರೆ ನನ್ನದೊಂದು ಷರತ್ತಿದೆ. ಅದೇನೆಂದು ಜನಕ ಕೇಳಲು, ನೀನು ರಾಜ್ಯಕೋಶ, ಸಿಂಹಾಸನ, ನಿನ್ನ ಶರೀರ ಮತ್ತು ನಿನ್ನ ಮನಸ್ಸು ನನಗೆ ನೀಡಬೇಕು” ಎನ್ನುತ್ತಾನೆ.
ಅದಕ್ಕೆ ರಾಜಆಯಿತು ಎನ್ನುತ್ತಾನೆ.
ಆಗ ಅಷ್ಟಾವಕ್ರ-
“ನಿನ್ನದೆಲ್ಲವೂ ನನ್ನದಾಯಿತು; ನೀನೀಗ ಸಿಂಹಾಸನದಿಂದ ಕೆಳಗೆ ಬಾ” ಎನ್ನುತ್ತಾನೆ.
ಹಾಗೆ ಬಂದ ರಾಜನಿಗೆ ಅರಮನೆಯ ದ್ವಾರದಲ್ಲಿ ಅನೇಕ ಪಾದರಕ್ಷೆಗಳಿವೆ ಅದರ ಮೇಲೆ ಕುಳಿತುಕೊ ಎನ್ನುತ್ತಾನೆ. ರಾಜ ಹಾಗೇ ಮಾಡಲು ಕುಳಿತುಕೊಂಡಾಗ ಅವನಿಗೆ ರಾಜ್ಯ, ಕೋಶ, ಸಿಂಹಾಸನ ಇದರ ಬಗ್ಗೆಯೇ ಚಿಂತೆಯಾಗುತ್ತದೆ.
ಆಗ ಅಷ್ಟಾವಕ್ರ-
“ಏನು ಚಿಂತಿಸುತ್ತಿದ್ದೀಯಾ? ನಿನ್ನ ಮನಸ್ಸೂ ನನ್ನದಲ್ಲವೇ?” ಎನ್ನುತ್ತಾನೆ.
ಆಗ ತನ್ನ ತಪ್ಪಿನ ಅರಿವಾದ ರಾಜ ಬಾಹ್ಯವಸ್ತುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ತನ್ನೂಳಗೆ ಚಿಂತಿಸುತ್ತಾನೆ. ಕೆಲವೇ ಸಮಯದಲ್ಲಿ ಅವನಿಗೆ ಆತ್ಮಜ್ಞಾನ ಉಂಟಾಗಿ ಸಾಕ್ಷಾತ್ಕಾರವಾಗುತ್ತದೆ. ಆಗ ಅಷ್ಟಾವಕ್ರ ಅಹಂ ಬಿಟ್ಟಕೂಡಲೇ ಆತ್ಮಜ್ಞಾನ ಸಿಗುತ್ತದೆ ಎನ್ನುತ್ತಾನೆ. ನಿನಗೆ ಒಳ್ಳೆಯದಾಗಲಿ ಎಂದು ಹರಸುತ್ತಾನೆ. ಮತ್ತು ಅವನಿಂದ ಪಡೆದ ಎಲ್ಲವನ್ನು ರಾಜನಿಗೆ ನೀಡುತ್ತಾನೆ. ಬೇರೆ ಯಾರೂ ತೋರದ ಮಾರ್ಗವನ್ನು ತೋರಿಸಿದ ಅಷ್ಟಾವಕ್ರ ಮಹಾಗುರು ಎನಿಸಿಕೊಳ್ಳುತ್ತಾನೆ.