|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

” ಇನ್ನಷ್ಟು ಗೋಸೇವೆ ಮಾಡುವ ಹಂಬಲ ” : ಅರುಣಾಕುಮಾರಿ ಕುಕ್ಕೆಮನೆ

 

 

” ನಮ್ಮ ಮಠದ ಮಹತ್ವದ ಯೋಜನೆಯಾದ ಮಾತೃತ್ವಮ್ ನ ಮೂಲಕ ಗೋಸೇವೆ ಮಾಡಲು ಆನಂದವೆನಿಸುತ್ತಿದೆ.‌ ಚಲಿಸುವ ದೇವಾಲಯವೇ ಆಗಿರುವ ಗೋಮಾತೆಯ ವಿವಿಧ ತಳಿಗಳ ಬಗ್ಗೆ ಜನ‌ಸಾಮಾನ್ಯರಿಗೂ ಅರಿವು ಮೂಡಿಸಿ ,ಅವರಿಂದಲೂ ಗೋಸೇವೆಯ ಮಹಾಕಾರ್ಯಕ್ಕೆ ಸಹಕಾರ ಪಡೆದು ಕೋಟಿ ಪುಣ್ಯ ಗಳಿಸುವ ಈ ಮಹತ್ಕಾರ್ಯದಲ್ಲಿ ಭಾಗಿಯಾಗುವುದು ಕೂಡ ಪುಣ್ಯ ಎಂಬ ಅನಿಸಿಕೆ ನನ್ನದು ” ಎಂದವರು ಮೂಲತಃ ದಕ್ಷಿಣ ಕನ್ನಡ ಮೂಲದ ಕುಕ್ಕೆಮನೆಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ , ಯಲಹಂಕ ವಲಯ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ ಅರುಣಾಕುಮಾರಿ ಕುಕ್ಕೆಮನೆ.

 

ಕಾಸರಗೋಡಿನ ಗುಂಪೆ ಮೂಲದ ಪ್ರಸ್ತುತ ಮೈಸೂರು ನಿವಾಸಿಗಳಾಗಿರುವ ಗೋವಿಂದ ಭಟ್, ತಿರುಮಲೇಶ್ವರಿ ದಂಪತಿಗಳ ಪುತ್ರಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

” ಸುಮಾರು ಮೂರು ದಶಕಗಳಿಂದ ಶ್ರೀಮಠದ ಸಂಪರ್ಕವಿದೆ. ಹಿರಿಯ ಗುರುಗಳ ಕಾಲದಿಂದಲೂ ತಾಯ್ತಂದೆಯರ ಜೊತೆ ಶ್ರೀಮಠಕ್ಕೆ ಬರುತ್ತಿದ್ದೆ. ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠವೇರಿದ ಬಳಿಕ ಶ್ರೀಮಠದ ವಿವಿಧ ಸೇವಾ ಯೋಜನೆಗಳಿಗೆ ಕೈ ಜೋಡಿಸುವ ಅವಕಾಶವೂ ದೊರಕಿತು. ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದಾಗ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವೀಣಕ್ಕನ ಪ್ರೋತ್ಸಾಹದಿಂದಾಗಿ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾದ ನನಗೆ ಅನೇಕ ಮಂದಿಯ ಸಹಕಾರವೂ ದೊರಕಿದೆ. ದೇಶೀಯ ಹಸುಗಳ ಮಹತ್ವವನ್ನು ಅನೇಕ ಮಂದಿಗೆ ತಲುಪಿಸಲು ಸಾಧ್ಯವಾಯಿತು ” ಎನ್ನುವ ಅರುಣಾಕುಮಾರಿ ಶ್ರೀಮಠದ ಎಲ್ಲಾ ಯೋಜನೆಗಳಿಗೂ ಕಾಣಿಕೆ ನೀಡಿದ್ದಾರೆ.

 

” ಗೋಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಮನಸ್ಸಿಗೆ ನೆಮ್ಮದಿ ದೊರಕಿದೆ. ಬದುಕಿನ ಅನೇಕ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಶ್ರೀಗುರುಗಳ ಅನುಗ್ರಹ ವರವಾಗಿ ಲಭಿಸಿದೆ. ಕುಸಿದ ಮನಸ್ಸಿಗೆ ಧೈರ್ಯ ತುಂಬುವ ಶಕ್ತಿ ಶ್ರೀಗುರುಗಳ ಆಶೀರ್ವಾದಕ್ಕೆ ಇದೆ ಎಂಬುದು ನನ್ನ ಬದುಕಿನ ಅನುಭವ. ನನ್ನ ಈ ಎಲ್ಲಾ ಸೇವೆಗಳಿಗೂ ಬೆನ್ನೆಲುಬಾಗಿ ನಿಂತವರು ನನ್ನ ಮನೆಯವರು ಮತ್ತು ಮಕ್ಕಳು ” ಎನ್ನುವ ಇವರಿಗೆ ಇನ್ನಷ್ಟು ಕಾಲ ಗೋಸೇವೆಯನ್ನು ಮುಂದುವರಿಸುವ ಹಂಬಲವಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ