ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಗಂವ್ಹಾರದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಗಂವ್ಹಾರ ಮಠದ ಪರಮಪೂಜ್ಯ ಶ್ರೀ ಸೋಪಾನನಾಥ ಮಹಾಸ್ವಾಮಿಗಳು ಉದ್ಘಾಟನಾ ಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಗೋಪರಿವಾರದ ಅಧ್ಯಕ್ಷ ಪೂಜ್ಯ ಶ್ರೀ ಪಾಂಡುರಂಗ ಮಹಾರಾಜ್ ಅವರು ಮಾರ್ಗದರ್ಶನ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಶ್ರೀಮತಿ ಸುಲೋಚನಾ ಅವರು, ಗೋಮಯಾದಿ ತೈಲ, ಸುಕಾಂತಿ ಫೇಸ್ ಪ್ಯಾಕ್, ಧೂಪ, ವಿಭೂತಿ, ದಂತಮಂಜನ, ಗೋಮಯ ಖಂಡ, ಫಿನಾಯಿಲ್, ನಿವೇದನಾ, ಶಮನ ತೈಲ, ಕೇಶತೈಲ, ಸುಚರಣ, ವಿಭೂತಿ, ದಂತಮಂಜನ, ಪಂಚಗವ್ಯ ಘೃತ, ಗೋಮಯಾದಿ ತೈಲ, ಸುಕೇಶ, ಸಾಬೂನು, ಸೇರಿದಂತೆ ಹಲವಾರು ಗವ್ಯಾಧಾರಿತ ಉತ್ಪನ್ನಗಳ ತಯಾರಿಯ ಕುರಿತು ಪ್ರಾಯೋಗಿಕ ತರಬೇತಿ ಹಾಗೂ ಬಳಕೆ-ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಗವ್ಯಾಧಾರಿತ ಕೃಷಿಯ ಬಗ್ಗೆಯೂ ಮಾಹಿತಿ ನೀಡಲಾಯಿತು. ಗವ್ಯೋತ್ಪನ್ನಗಳನ್ನು ಉಪಯೋಗಿಸಿ ಅದ್ಭುತ ಪರಿಣಾಮಗಳನ್ನು ಕಂಡುಕೊಳ್ಳುವ ಬಗೆಯನ್ನು ವಿವರಿಸಲಾಯಿತು. ಸಮೃದ್ಧಿ ಕೀಟ ನಿಯಂತ್ರಕ, ಜೀವಾಮೃತ, ಘನಾಮೃತ ಸೇರಿದಂತೆ ಅನೇಕ ಕೃಷಿ ಸಂಬಂಧಿತ ಗವ್ಯೋತ್ಪನ್ನಗಳನ್ನು ಪರಿಚಯಿಸಿಕೊಡಲಾಯಿತು. ಪ್ರಾಯೋಗಿಕವಾಗಿ ತಯಾರಿಸುವ ತರಬೇತಿಯನ್ನೂ ಕೊಡಲಾಯಿತು. ಗವ್ಯಾಧಾರಿತ ಕೃಷಿಯ ಫಲಾನುಭವಿ ರೈತರ ಅನುಭವ ಕಥನಗಳನ್ನು ವಿಡಿಯೋಗಳ ಮೂಲಕ ಪ್ರಸ್ತುತಪಡಿಸಲಾಯಿತು. ಗೋಮೂತ್ರ ಅರ್ಕ ತಯಾರಿಸುವ ಬಗೆಯನ್ನು ವಿವರಿಸಲಾಯಿತು. ಅರ್ಕದ ಘಟಕ ಸ್ಥಾಪಿಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.
ಪಂಚಗವ್ಯ ಪ್ರಶಿಕ್ಷಣದ ಸಂಚಾಲಕ ಡಾ. ರವಿ ಅವರು ಈ ಎಲ್ಲ ಉತ್ಪನ್ನಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಚ್ಚಾವಸ್ತುಗಳ ಲಭ್ಯತೆ, ತಯಾರಿಸುವಾಗ ಗಮನಿಸಬೇಕಾದ ಅಂಶಗಳು, ಪ್ರತಿ ಅಂಶಗಳ ಕುರಿತು ಏನು, ಏಕೆ, ಹೇಗೆ, ಯಾವಾಗ ಎಂಬುದನ್ನು ವಿವರಿಸಿದರು. ತಯಾರಿಸಿದ ಉತ್ಪನ್ನಗಳಿಗೆ ಯಾವ ರೀತಿಯ ಬೇಡಿಕೆ ಇದೆ, ಮಾರುಕಟ್ಟೆ ಮಾಡುವ ವಿಧಾನ, ಮಾರುಕಟ್ಟೆಗೆ ಭಾರತೀಯ ಗೋಪರಿವಾರ ಯಾವ ರೀತಿಯಲ್ಲಿ ಸಹಕರಿಸಲಿದೆ ಎಂಬ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು.
ಶಿಬಿರವು ಮೂರು ದಿನಗಳ ಕಾಲ ನಡೆಯಿತು.