ನಕಲಿ ಅಶ್ಲೀಲ ಸಿಡಿ ಕೇಸ್ – ಚಾರ್ಜ್’ಶೀಟ್ ರದ್ಧತಿಗೆ ನಕಾರ ; ತನಿಖೆ ಮುಂದುವರಿಸಲು ಆದೇಶ

ಸುದ್ದಿ

ನಕಲಿ ಅಶ್ಲೀಲ ಸಿಡಿ ತಯಾರಿಸಿ; ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್’ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ.

 

2010 ರಲ್ಲಿ ಪೂಜ್ಯ ಶ್ರೀಗಳನ್ನು ಹೋಲುವ ವ್ಯಕ್ತಿಗೆ ಶ್ರೀಗಳಂತೆ ಉಡುಗೆತೊಡುಗೆಯನ್ನು ತೊಡೆಸಿ, ಶ್ರೀಗಳಂತೆ ಹಾವ-ಭಾವಗಳ ಅಭ್ಯಾಸ ಮಾಡಿಸಿ; ಚಿತ್ರೀಕರಣ ಮಾಡಲಾಗಿತ್ತು. ವೈದಿಕ ವೃತ್ತಿಯಲ್ಲಿರುವ ಆರೋಪಿಗಳು, ತಮ್ಮ ಮಧ್ಯೆ ನಡೆಸಿದ ಸಂಭಾಷಣೆಗಳು, ಹಂಚಿಕೊಂಡ ವಿಡಿಯೋಗಳು ಶ್ರೇಷ್ಠವಾದ ಆ ವೃತ್ತಿಯ ಗೌರವಕ್ಕೆ ಚ್ಯುತಿತರುವಂತೆ ಇದ್ದವು ಹಾಗೂ ಕೋಟ್ಯಂತರ ರೂಪಾಯಿಗಳ ಸಾಫ್ಟವೇರ್ ಹಾಗೂ ಹಾಲಿವುಡ್ ತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರಗಳನ್ನು ಅಶ್ಲೀಲ ಚಿತ್ರಗಳ ಜೊತೆ ಜೋಡಿಸಿ, ತೋಜೋವಧೆ ಮಾಡುವ ಯತ್ನಗಳು ನಡೆದಿದ್ದವು. ಮಾರ್ಫಿಂಗ್ ಮಾಡಿದ ಚಿತ್ರಗಳನ್ನು ಬಳಸಿಕೊಂಡು ಅಶೀಲ ಸಿಡಿ ತಯಾರಿಸಿ, ಲೋಕಮುಖದಲ್ಲಿ ಶ್ರೀಗಳ ಮಾನಾಪಹರಣಮಾಡುವ ಹೀನಕೆಲಸ ಹಾಗೂ ಅದನ್ನು ರಾಷ್ಟ್ರಮಟ್ಟದ ಸುದ್ಧಿವಾಹಿನಿಯೊಂದರಲ್ಲಿ ಪ್ರಸಾರ ಮಾಡಿಸಲು ಮಾತುಕತೆಗಳೂ ನಡೆದಿದ್ದವು.

 

ದಕ್ಷ ಪೋಲಿಸ್ ಅಧಿಕಾರಿ ಐಜಿಪಿ ಗೋಪಾಲ್ ಹೊಸೂರ್ ನೇತೃತ್ವದ ಪೋಲಿಸ್ ತಂಡ ಈ ಹೀನ ಹುನ್ನಾರವನ್ನು ಭೇದಿಸಿ, ಆರೋಪಿಗಳನ್ನು ಸಾಕ್ಷಾಧಾರ ಸಮೇತವಾಗಿ ಗೋಕರ್ಣದಲ್ಲಿ ಬಂಧಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪ್ರಯೋಗಾಲಯವೂ ಈ ಕುಕೃತ್ಯವನ್ನು ದೃಢೀಕರಿಸಿತ್ತು. ಆನಂತರ ತನಿಖೆ ನಡೆದು ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿಯೂ ಸಲ್ಲಿಕೆಯಾಗಿತ್ತು. ಈ ಮಧ್ಯೆ ವಿಚಾರಣೆಯನ್ನು ನಿಲ್ಲಿಸುವ, ಪ್ರಕರಣವನ್ನು ಮುಚ್ಚಿಹಾಕುವ ಹಲವಾರು ವಿಫಲಯತ್ನಗಳು ನಡೆದವು.

 

ಸೋಲುಗಳ ಸರಮಾಲೆ :

ಪ್ರಕರಣ ತನಿಖಾ ಹಂತದಲ್ಲಿ ಇರುವಾಗ ಉಚ್ಚನ್ಯಾಯಾಲಯದಲ್ಲಿ ದೂರನ್ನು ರದ್ಧುಗೊಳಿಸಲು ಪ್ರಯತ್ನಿಸಿ ಸೋತರು, ಕುಮಟಾ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ವಜಾಗೊಳಿಸಲು ಎರಡು ಬಾರಿ ವಿಫಲ ಯತ್ನ ನಡೆಸಿದರು, 2015 ರಲ್ಲಿ ಸ್ವಯಂ ರಾಜ್ಯಸರ್ಕಾರವೇ ಷಡ್ಯಂತ್ರಿಗಳ ಪರವಾಗಿ ನಿಂತು; ಅಭಿಯೋಜನೆಯ ಮೂಲಕ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿತಾದರೂ, ನ್ಯಾಯಾಲಯ ಅದಕ್ಕೆ ತಡೆಯೊಡ್ಡಿತು. ಇದೀಗ ಜಿಲ್ಲಾ ಸತ್ರ ನ್ಯಾಯಾಲಯವೂ ಆರೋಪಿಗಳ ಮೇಲ್ಮನವಿಯನ್ನು ತಿರಸ್ಕರಿಸಿದ್ದು, ದೋಷಾರೋಪಣೆಯ ವಿಚಾರಣೆ ನಡೆಸುವಂತೆ ಆದೇಶ ಮಾಡಿದೆ. ಪ್ರಕರಣದಲ್ಲಿ ಆರೋಪಿಗಳಿಗಾದ ಪ್ರತಿಯೊಂದೂ ಸೋಲೂ ಕೂಡ ಶ್ರೀಮಠದ ಮೇಲೆ ನಡೆಯುತ್ತಿರುವುದು ಹೀನ ಷಡ್ಯಂತ್ರವೆಂಬ ನಿಲುವನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

 

ನಕಲಿ ಅಶ್ಲೀಲ ಸಿಡಿ ಪ್ರಯತ್ನ ವಿಫಲವಾದ ನಂತರ, ನಕಲಿ ಪಿ.ಐ.ಲ್ – 10 ಕೋಟಿ ಬ್ಲಾಕ್’ಮೇಲ್, ಮೊದಲ ಮಿಥ್ಯಾರೋಪ, ಆನಂತರ ಎರಡನೇ ಮಿಥ್ಯಾರೋಪ… ಮುಂತಾದವುಗಳ ಮೂಲಕ ಶ್ರೀಮಠ ಹಾಗೂ ಶ್ರೀಗಳ ಮೇಲೆ ನಿರಂತರವಾಗಿ ಕೇಸುಗಳನ್ನು ಹಾಕಿ, ಕಿರುಕುಳ ನೀಡುವ, ತೋಜೋವಧೆ ಮಾಡುವ ಪ್ರಯತ್ನಗಳಾಗುತ್ತಿವೆಯಾದರೂ, ಸತ್ಯ ಹಾಗೂ ಧರ್ಮದ ತಳಹದಿಯಲ್ಲಿರುವುದರಿಂದ ಶ್ರೀಮಠದ ಯಾ ಶ್ರೀಗಳ ಧವಳಕೀರ್ತಿಗೆ ಮಸಿಬಳಿಯುವ ಯಾವ ಪ್ರಯತ್ನವೂ ಗೆಲ್ಲಲಾರದು.

 

ಶ್ರೀಮಠವು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಚಲವಾದ ವಿಶ್ವಾಸವನ್ನು ಹೊಂದಿದ್ದು, ದಕ್ಷ ಪೋಲಿಸ್ ಅಧಿಕಾರಿಗಳು ಸಾಕ್ಷಾಧಾರ ಸಹಿತವಾಗಿ ಭೇದಿಸಿದ ಹಾಗೂ ಷಡ್ಯಂತ್ರಗಳಿಗೆ ಮೂಲವಾದ ಈ ನಕಲಿ ಅಶ್ಲೀಲ ಸಿಡಿ ಪ್ರಕರಣದ ಸಮಗ್ರ ತನಿಖೆ ನಡೆದು, ಆರೋಪಿಗಳ ಹಾಗೂ ಆರೋಪಿಗಳ ಹಿನ್ನೆಲೆಯಲ್ಲಿರುವವರಿಗೆ ನ್ಯಾಯಾಂಗ ವ್ಯವಸ್ಥೆಯ ಮೂಲಕ ಸೂಕ್ತ ಶಿಕ್ಷೆಯಾಗಲಿ, ಒಳಿತನ್ನು ಕೆಡುಕಿನಂತೆ ಬಿಂಬಿಸುವ ಹೀನ ಕಾರ್ಯಮಾಡುವವರು ಸರಿಯಾದ ಪಾಠಕಲಿಯುವಂತಾಗಲಿ ಎಂದು ಶ್ರೀಮಠ ಆಶಿಸುತ್ತದೆ.

Author Details


Srimukha

Leave a Reply

Your email address will not be published. Required fields are marked *