ಮಾತು~ಮುತ್ತು : ದೃಷ್ಟಿಯ ಹಿಂದಿನ ಕಥೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

 

ಒಮ್ಮೆ ಒಬ್ಬ ತಂದೆ ತನ್ನ 25 ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಅವರ ಎದುರಿನಲ್ಲಿ ಆಗ ತಾನೇ ಮದುವೆಯಾದ ನವದಂಪತಿಗಳು ಕುಳಿತ್ತಿದ್ದರು. ರೈಲು ಸಾಗುತ್ತಿತ್ತು.

 

ಸ್ವಲ್ಪ ಸಮಯದ ಅನಂತರ ಯುವಕ ಹೊರಗಡೆ ನೋಡುತ್ತಾ, ತಂದೆಯ ಹತ್ತಿರ-
“ಮರಗಳೆಲ್ಲ ಓಡುತ್ತಿವೆ; ನೋಡು” ಎನ್ನುತ್ತಾನೆ. ಆಗ ತಂದೆ- “ಹೌದು ಹೌದು” ಎನ್ನುತ್ತಾನೆ.
ಇನ್ನು ಸ್ವಲ್ಪ ದೂರ ಸಾಗಿದ ಅನಂತರ ಅಲ್ಲಿ ಕಾಣುವ ಒಂದೊಂದೇ ವಸ್ತುಗಳನ್ನು ನೋಡುತ್ತಾ ಆ ಯುವಕ ಅವೇ ಮಾತುಗಳನ್ನು ಹೇಳುತ್ತಾ ಹೋಗುತ್ತಾನೆ. ತಂದೆ ಹೌದು ಹೌದು ಎನ್ನುತ್ತಿರುತ್ತಾನೆ. ಇದನ್ನು ನೋಡಿ ಆ ಯುವಜೋಡಿಗೆ ಆಶ್ಚರ್ಯವೂ ಅನುಕಂಪವೂ ಏಕಕಾಲದಲ್ಲಿ ಉಂಟಾಗುತ್ತದೆ. ‘ಈ ಯುವಕನಿಗೆ ಏನೋ ನ್ಯೂನತೆಯಿದೆ’ ಎಂದು ಅವರು ತಿಳಿದುಕೊಂಡು, ಆ ಯುವಕನ ತಂದೆಯನ್ನು ಯಾರಾದರೂ ಸರಿಯಾದ ವೈದ್ಯರಲ್ಲಿ ನಿಮ್ಮ ಮಗನನ್ನು ಯಾಕೆ ತೋರಿಸಲಿಲ್ಲ? ಎಂದು ಕೇಳುತ್ತಾರೆ.
ಆಗ ಆ ಯುವಕನ ತಂದೆ ಹೇಳುತ್ತಾನೆ-
“ನಾವು ಇದೀಗ ಆಸ್ಪತ್ರೆಯಿಂದಲೇ ಬರುತ್ತಿದ್ದೇವೆ; ಅವನಿಗೆ ದೃಷ್ಟಿ ಇರಲಿಲ್ಲ; ಇಂದಷ್ಟೇ ಅವನಿಗೆ ದೃಷ್ಟಿ ಬಂದಿದೆ; ವೈದ್ಯರ ಶಸ್ತ್ರಚಿಕಿತ್ಸೆಯಿಂದ ಕಣ್ಣು ಕಾಣುವಂತಾಗಿದೆ; ಹಾಗಾಗಿ ಈಗಷ್ಟೇ ಪ್ರಪಂಚವನ್ನು ನೋಡುತ್ತಿರುವುದರಿಂದ ಎಲ್ಲವೂ ಅವನಿಗೆ ಹೊಸದಾಗಿ ಕಾಣಿಸುತ್ತಿದೆ” ಎಂದು.
ಈ ಮಾತುಗಳನ್ನು ಕೇಳಿದ ಯುವಜೋಡಿ ದಿಗ್ಭ್ರಾಂತರಾಗುತ್ತಾರೆ.

 

ಎಷ್ಟೋ ಸಂದರ್ಭಗಳಲ್ಲಿ ನಾವೂ ಕೂಡ ಹಿಂದೆ ಮುಂದೆ ಆಲೋಚಿಸದೇ ಘಟನೆಗಳಿಗೆ ಪ್ರತಿಕ್ರಿಯೆ ನೀಡುತ್ತೇವೆ. ಪ್ರತಿಯೊಬ್ಬನ ನಡೆ-ನುಡಿಯಲ್ಲಿ ಒಂದು ಹಿನ್ನಲೆ ಇರಬಹುದು. ನಾವು ಅದನ್ನು ಆಲೋಚಿಸಿ ನಿರ್ಧಾರ ಮಾಡಬೇಕು.

Author Details


Srimukha

Leave a Reply

Your email address will not be published. Required fields are marked *