ಬೆಂಗಳೂರು: ಉತ್ಥಾನದ್ವಾದಶಿಯ ಪುಣ್ಯಕಾಲದಂದು ಶ್ರೀಸಂಸ್ಥಾನದವರ ಸಂಕಲ್ಪದಂತೆ ಸಪರಿವಾರ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಅಖಂಡ (ಖಂಡವಿಲ್ಲದ ಇಡಿಯ ಗೋಧಿ) ಗೋಧಿ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು.
ಮುಂಜಾನೆ ಶ್ರೀಸಂಸ್ಥಾನದವರು ರಾಮದೇವರ ಪೂಜೆ ಗೈಯ್ಯುವ ವೇಳೆಗೆ ಘಮಘಮಿಸುವ ತುಂಡಿಲ್ಲದ ಗೋಧಿಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಒಟ್ಟು 8 ದ್ರೋಣದ ಪ್ರಮಾಣದಲ್ಲಿ ಅಂದ್ರೆ ಒಂದು ದ್ರೋಣಕ್ಕೆ 16 ಸೇರಿನ ಪ್ರಮಾಣದಲ್ಲಿ ಒಟ್ಟು 122.850 ಕೆಜಿ ಇಡಿ ಗೋಧಿಯ ಪಾಯಸ ಶ್ರೀರಾಮನಿಗೆ ಸಮರ್ಪಿತಗೊಂಡಿತು.
ಶ್ರೀಸಂಸ್ಥಾನದ ಕರದಿಂದ ಅರ್ಚಿತಗೊಳ್ಳುವ ಶ್ರೀರಾಮನಿಗೆ ಪಾಯಸ ಸಮಪರ್ಣೆಗೊಂಡ ಬಳಿಕ ಪ್ರಸಾದವಾಗಿ ಈ ಪಾಯಸವನ್ನು ಶ್ರೀಮಠದ ಭಕ್ತರಿಗೆ, ಬೆಂಗಳೂರಿನ ಶ್ರೀವಿದ್ಯಾಭಾರತೀ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಯ 4000 ಮಕ್ಕಳಿಗೆ , ಗಿರಿನಗರದ ಶ್ರೀಮಹಾಗಣಪತಿ ದೇವಾಲಯದ ಭಕ್ತರಿಗೆ, ಬನಶಂಕರಿ ದೇವಾಲಯದ ಭಕ್ತರಿಗೆ ಹೀಗೆ ನಗರದ ಹಲವೆಡೆ ಪ್ರಸಾದವಾಗಿ ವಿತರಿಸಲಾಯಿತು.
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ || ಪ ||
ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆಯಿರೊ || 1 ||
ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟು
ಬುದ್ದಿ ಪಾಕ ಮಾಡಿ ಅನಿರುದ್ಧ ಹರಿಯ ನೆನೆಯಿರೊ || ೨ ||
ಆನಂದ ಆನಂದವೆಂಬೊ ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ ಪುರಂದರವಿಠಲ ನೆನೆಯಿರೊ || ೩ ||