ಮಠವೆಂಬ ಮನೆ, ಗುರುವೆಂಬ ತಾಯಿ – ರಮ್ಯಾ ಸುರೇಶ್ ಮಾಬಲಡ್ಕ

ಲೇಖನ

ಮಠವೆಂಬ ಮನೆ, ಗುರುವೆಂಬ ತಾಯಿ, ಈ ಶೀರ್ಷಿಕೆ ಯಾಕೆಂದರೆ, ನಮ್ಮ ಮಠದಲ್ಲಿದ್ದರೆ ಮನೆಯದ್ದೇ ಭಾವ, ಮನೆಗಿಂತಲೂ ಹೆಚ್ಚಿನ ನೆಮ್ಮದಿ. ಗುರು ದೃಷ್ಟಿಗೆ ಸಿಲುಕುವಂತ್ತಿದ್ದಲ್ಲಿ, ತಾಯಿಯ ಮಮತೆಯ ಭಾವ, ತಾಯಿಯ ಮಡಿಲಿಗಿಂತಲೂ ಹೆಚ್ಚಿನ ನೆಮ್ಮದಿ.

ಯಾವ ಮಠ ಅಂತೀರಾ – ನಮ್ಮ ಪ್ರೀತಿಯ ಶ್ರೀ ರಾಮಚಂದ್ರಾಪುರ ಮಠ.
ಯಾವ ಗುರು ಕೇಳ್ತೀರಾ – ನಮ್ಮ ಪ್ರೀತಿಯ ಶ್ರೀ ಸಂಸ್ಥಾನ.

ಅಜ್ಞಾನ, ಅಂಧಕಾರಗಳು ಮನೆ ಮಾಡಿತ್ತು. ಸಂಸ್ಕಾರ, ಧರ್ಮವೆಂಬ ಶಬ್ಧಗಳೇ ಹಿಂದೆ ಸರಿಯುತ್ತಾ ಇತ್ತು. ಶಾಲೆ, ಕಾಲೇಜು, ಉದ್ಯೋಗ, foreign visits, ಮನೆ, ಕಾರ್ ಹೀಗೆ ನಾನು, ನನ್ನದು, ನನಗೆ ಎಂಬ ಸ್ವಂತದ್ದನ್ನು ಮಾತ್ರ ನೆನೆದು ಸಮಾಜ ಮುಂದೆ ಹೋಗುತ್ತಾ ಇತ್ತು. ನದಿ ಹರಿದು ಸಮುದ್ರದಲ್ಲಿ ಸೇರಬೇಕಾದದ್ದು ಸಹಜತೆ, ಆದರೆ ಆ ನದಿಯು ಕಾಲುವೆಗಳನ್ನ ಮಾಡಿಕೊಂಡು ಅತ್ತಲಿತ್ತ ಸುಮ್ಮನೇ ಸುತ್ತುತ್ತಿತ್ತು. ದಾರಿ ತಪ್ಪಿ ಅಲೆದಾಡುತ್ತಿರುವುದನ್ನ ನೋಡಿದ ಭಗವಂತನಿಗೆ ಕರುಣೆ ಬಂತು, ನದಿಯನ್ನ ಮತ್ತೆ ಸಮುದ್ರಕ್ಕೆ ಸೇರಿಸಲು ಕಳುಹಿಸಿ ಕೊಟ್ಟ ಅರಿವೆಂಬ ಗುರುವನ್ನ. ನದಿಯು ನಾವು, ಸಮುದ್ರ ಭಗವಂತ, ನದಿಯು ಹರಿದು ಸಮುದ್ರ ಸೇರುವುದು, ನಾವು ನಡೆದು ಭಗವಂತನ‌ ಸೇರುವುದು ಸಹಜತೆ, ಆದರೆ ಅದನ್ನ ಬಿಟ್ಟು ಅಲ್ಲಿ ಇಲ್ಲಿ ಸುತ್ತಿ, ಒಗ್ಗಟ್ಟನ್ನೂ ಕಳೆದು, ಹಾಗೆಂದು, ದಾರಿ  ತಪ್ಪಿದೆ ಎಂಬ ಅರಿವೂ ಇಲ್ಲದೇ ಅಲೆದಾಡುತ್ತಾ ಇರಬೇಕಾದರೆ ಧರ್ಮ ಸಂಸ್ಥಾಪನೆಗೆ, ಒಗ್ಗಟ್ಟಿನ ಬಲವನ್ನ ತೋರಿಸಲು, ದಾರಿ ತಪ್ಪಿ ನಡೆವವರನ್ನ ಮರಳಿ ಎಳೆಯಲು, ಅದೂ ದಂಡದ ಬಲದಿಂದಲ್ಲ, ತಾಯಿ ತೋರುವ ಮಮತೆಯ ಬಲದಿಂದ ಎಂದು ಸಾರಿ ಹೇಳಲು ಧರೆಗಿಳಿದರು ನಮ್ಮ ಶ್ರೀಸಂಸ್ಥಾನಾ, ಅದೂ ಅಂತಹ-ಇಂಥಹ ಮಠದ ಪೀಠಾಧಿ ಪತಿಯಾಗಿ ಅಲ್ಲ, 1300 ವರ್ಷಕ್ಕೂ ಹೆಚ್ಚು ಇತಿಹಾಸವಿರುವ, ಶಂಕರಾಚಾರ್ಯರಿಂದ ಹಿಡಿದು, ಅವಿಚ್ಛಿನ್ನವಾಗಿರುವ ನಮ್ಮ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿ ಪತಿಯಾಗಿ ಬಂದರು. ಇದು ನಮ್ಮೆಲ್ಲರ ಭಾಗ್ಯವೇ ಸರಿ. ಶ್ರೀ ಸಂಸ್ಥಾನದವರ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವ ಹೆಗ್ಗಳಿಕೆ ನಮ್ಮದು. ಅವರ ಶಿಷ್ಯವರ್ಗದಲ್ಲಿದ್ದೇವೆ ಎಂದರೆ ಇದಕ್ಕಿಂತ ದೊಡ್ಡ ಡಾಕ್ಟರೇಟ್ ಪದವಿಯೇ ಇಲ್ಲ. ಇಡೀ ಲೋಕಕ್ಕೇ ಒಬ್ಬರೇ ಒಬ್ಬರು ಶಂಕರಾಚಾರ್ಯರು, ಅವರ ಕಾಲದಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ಬಂದಿರುವ ಒಂದೇ ಒಂದು ಪೀಠ , ಅದು ನಮ್ಮ ಶ್ರೀ ರಾಮಚಂದ್ರಾಪುರ ಮಠದ ಪೀಠ , ಇದನ್ನ ಹೇಳಿಕೊಳ್ಳುವ ಹೆಮ್ಮೆ ನಮ್ಮದು.

 

ಇನ್ನು ನನ್ನ ವಿಷಯಕ್ಕೆ ಬರುವುದಾದರೆ, ಗುರಿ ಇಲ್ಲ, ಗುರುವಿಲ್ಲ, ಜೀವನದ ಉದ್ದೇಶದ ಅರಿವೆ ಇಲ್ಲದೇ ದಿನ ದೂಡುತ್ತಿದ್ದ ಕಾಲ. ಶಾಲೆ ಆಯಿತು, ಕಾಲೇಜು ಆಯಿತು, ಸಮಯ ಕಳೆಯುತ್ತಿದೆ, ದಿನ ಬೆಳಗಾಗುತ್ತಿದೆ, ಊಟ, ತಿಂಡಿ, ಓದು, ನಿದ್ರೆ ಹೀಗೆ ದಿನ ಹೋಗುತ್ತಿತ್ತು. ಬರೀ ಇಷ್ಟಕ್ಕಾಗಿಯೇ ಈ ಭೂಮಿಗೆ ಬಂದನೇ ಎಂಬ ಪ್ರಶ್ನೆ ಕಾಡಿ ಕಾಡಿ ಕಾಡಿ ಕೊನೆಗೆ ಊರಿನಿಂದ ಬೆಂಗಳೂರಿಗೆ ಬಂದು ಬಿದ್ದೆ. ಆದರೆ ಅದು ಬಿದ್ದಿದ್ದಲ್ಲ ಎದ್ದಿದ್ದು, ಯಾಕೆಂದರೆ ಅದು ಬಿದ್ದಿದ್ದು ಅರಿವೆಂಬ ಗುರುವಿನ ಚರಣಕ್ಕೆ. ಅಲ್ಲಿ ಒಮ್ಮೆ ಬಿದ್ದರೆ ಮತ್ತೆ ಅದು ಏಳಿಗೆಯತ್ತದ ಹಾದಿ. ಅಜ್ಞಾನದಿಂದ ಜ್ಞಾನದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ, ಹೊರಬೆಳಕಿನಿಂದ ಒಳಬೆಳಕಿನೆಡೆಗಿನ ಪಯಣ.

 

ಪ್ರಶ್ನೆಗಳ ಬಿಂದುವು ನಾನಾದರೆ, ಉತ್ತರಗಳ ಸಿಂಧುವು ಶ್ರೀ ಸಂಸ್ಥಾನದವರು. ನನಗೆ ಮದುವೆಯ ಕಾಲ ಬಂದಾಗ ಭಯವಿತ್ತು, ಎಲ್ಲಿಯಾದರೂ ಗುರು-ದೇವರ ಮೇಲೆ ಭಕ್ತಿ ಇಲ್ಲದವರಾದಲ್ಲಿ ಮುಂದೇನೆಂದು?? ಮನದಾಳದಲ್ಲಿ ಗುರು-ರಾಮರಲ್ಲಿ ಪ್ರಾರ್ಥಿಸಿದ ಫಲ, ನನ್ನ ಭಕ್ತಿಗಿಂತಲೂ ಹತ್ತೋ ನೂರೋ ಪಾಲು ಜಾಸ್ತಿ ಗುರು-ದೇವರಲ್ಲಿ ಪ್ರೀತಿ-ಭಕ್ತಿ ಇರುವಂತಹ ಪತಿ. ಇನ್ನು, ಹುಟ್ಟುವ ಮಗು ಹೇಗಿರುವುದೋ ಎಂಬ ಭಯ ಕಾಡಿತ್ತು, ಅದಕ್ಕೂ ಸಿಕ್ಕ ಉತ್ತರ, “ದಿನಾ ಶಾಲೆಗೆ ಹೋಪ ಬದಲು, ದಿನಾ ಮಠಕ್ಕೆ ಹೋದರೆ ಎಷ್ಟು ಒಳ್ಳೆದಲ್ಲಾ ಅಮ್ಮಾ!”. ಮಗುವಿನ ಈ ಮಾತುಗಳು ತುಂಬಿತು ಹೃದಯವನ್ನ. ನಮ್ಮೆಲ್ಲರಿಗೂ ಮಠಬೇರೆಯಲ್ಲ, ಮನೆ ಬೇರೆಯಲ್ಲ. ಶ್ರೀ ಸಂಸ್ಥಾನ ನಮಗೆಲ್ಲರಿಗೂ ಗುರು ಚಾಮಿ. ಕೊಟ್ಟಿದ್ದು ಅತ್ಯಲ್ಪ. ಅಷ್ಟೋ ಇಷ್ಟೋ ಸೇವೆ, ಆದರೆ ಪಡೆದಿದ್ದು ಅದೆಷ್ಟೋ ಅಳೆಯಲೂ ಸಾಧ್ಯವಿಲ್ಲದಷ್ಟೂ ಆಶೀರ್ವಾದ.

 

ನಮ್ಮ ಮಠ, ನಮ್ಮ ಶ್ರೀ ಸಂಸ್ಥಾನದವರು ಪ್ರೀತಿಯಿಂದ ಕರೆಯುತ್ತಿದ್ದಾರೆ ಜೀವನದ ಉದ್ದೇಶ, ಸಾಧನೆಯ ಹಾದಿಯಲಿ ನಡೆದು ಗುರಿ ಮುಟ್ಟಲು, ಎಲ್ಲರೂ ಜೊತೆಯಾಗಿ ಬನ್ನಿ ಎಂದು. ಜೀವನದ ಪರಮ ಉದ್ದೇಶ ಎಲ್ಲರದ್ದೂ ಒಂದೇ. ಅತ್ಯಂತ ನೆಮ್ಮದಿಯ ಸಾಧನೆ ಮಾಡುವುದು, ಭಗವಂತನಲ್ಲಿ ಒಂದಾಗುವುದು, ಅಲ್ಲಿಗೆ ತಲಪುವ ಮಾರ್ಗ ಬೇರೆ ಬೇರೆ ಇರಬಹುದು. ನಮ್ಮ ಮಠದಲ್ಲಿ ಎಲ್ಲಾ ಮಾರ್ಗದವರಿಗೂ ಮುಕ್ತ ಅವಕಾಶವಿದೆ.

 

ನಾವು ಕರ್ಮ ಮಾರ್ಗದಲ್ಲಿ ಚಲಿಸುವವರಾಗಿದ್ದಲ್ಲಿ, ಶ್ರೀ ಸಂಸ್ಥಾನದವರ ಮಾರ್ಗದರ್ಶನದಲ್ಲಿ ಅದೆಷ್ಟು ಯೋಜನೆಗಳು, ಅದೆಷ್ಟು ಸೇವಾವಕಾಶ, ಅದೆಷ್ಟು ಕೆಲಸ ಕಾರ್ಯಗಳು, ಜನ್ಮ ಜನ್ಮಗಳ ಪಾಪಗಳನ್ನು ಸೇವೆ ಮಾಡುವ ಮೂಲಕ ತೊಳೆಯಲು ಸದವಕಾಶ ನಮಗಿದೆ. ತನು, ಮನ, ಧನಗಳಿಂದ ಸೇವಾವಕಾಶ. ಗೋಸ್ವರ್ಗ ಕಾರ್ಯ, ಗೋರಕ್ಷಣಾ ಕಾರ್ಯ, ಗೋಶಾಲೆಗಳ ಕಾರ್ಯ ಹೀಗೆ ಹತ್ತು ಹಲವು ಸೇವೆಗಳನ್ನ ಸಲ್ಲಿಸಿ ಮುಕ್ತಿಯ ಮಾರ್ಗವನ್ನ ಹಿಡಿಯುವ ಸದವಕಾಶವಿದೆ.

 

ಭಕ್ತಿ ಮಾರ್ಗದಲ್ಲಿ ಚಲಿಸುವವರು ನಾವಾಗಿದ್ದಲ್ಲಿ, ಶ್ರೀ ಸಂಸ್ಥಾನದವರು ಭಕ್ತಿಯಿಂದ ದಿನನಿತ್ಯ ಮಾಡುವ ಎರಡು ಪೂಜೆಗಳಲ್ಲಿ ಭಾಗಿಗಳಾಗೋಣ. ಕಣ್ಣು ತೆರೆದು ರಾಮ ಪೂಜೆಯನ್ನು ನೋಡೋಣ, ಕಣ್ಣು ಮುಚ್ಚಿ ಒಳಗಿನ ರಾಮನನ್ನ ಅನುಭವಿಸೋಣ. ಜೀವನ್ಮುಕ್ತಿಯತ್ತ ಹೆಜ್ಜೆ ಇಡೋಣ.

 

ಜ್ಞಾನ ಮಾರ್ಗದವನ್ನ ಹಿಡಿದವರಾಗಿದ್ದಲ್ಲಿ, ಜ್ಞಾನ ಭಂಡಾರ ಶ್ರೀ ಸಂಸ್ಥಾನ. ಭಜಗೋವಿಂದಂ, ಸಾಧನಾ ಪಂಚಕಂ, ರಾಮ ಕಥೆ, ತತ್ವ ಭಾಗವತ, ಆಶೀರ್ವಚನಗಳು ಹೀಗೆ ಪ್ರತೀ ಮಾತಿನಲ್ಲೂ ಜ್ಞಾನವನ್ನ ಹರಿಸಿ ನಮ್ಮ ಅಜ್ಞಾನ ಕಳೆಯಲು ಶ್ರೀ ಪೀಠ ಕಾಯುತ್ತಿದೆ, ನಮ್ಮ ಬರುವಿನ ನಿರೀಕ್ಷೆಯಲ್ಲಿ, ನಮ್ಮ ಅಜ್ಞಾನವ ತೊಳೆಯುವುದಕ್ಕಾಗಿ, ನಮಗೆ ಜೀವನದ ಪರಮ ಉದ್ದೇಶವನ್ನ ತಿಳಿಸುವುದಕ್ಕಾಗಿ ಕಾಯುತ್ತಾ ಇದೆ‌ ಪೀಠ, ನಮ್ಮನ್ನು ನಾವು ಸಮರ್ಪಿಸಿ, ಜೀವನದ ಧ್ಯೇಯವನ್ನ ಸಾಧಿಸೋಣ.

 

ಮಠವೆಂಬ ಮನೆಗೆ ಬನ್ನಿ. ಶ್ರೀ ಸಂಸ್ಥಾನ ಎಂಬ ತಾಯಿಯ ಅಮೃತವ ಸವಿದು, ಜೀವನವೆಂಬ ಸಾಗರವನ್ನು ಸುಲಭದಿಂದ ದಾಟೋಣ.
ನಮ್ಮ ಶ್ರೀ ರಾಮಚಂದ್ರಾಪುರ ಮಠಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತ…

Author Details


Srimukha

14 thoughts on “ಮಠವೆಂಬ ಮನೆ, ಗುರುವೆಂಬ ತಾಯಿ – ರಮ್ಯಾ ಸುರೇಶ್ ಮಾಬಲಡ್ಕ

    1. ಹರೇ ರಾಮ… ನಮ್ಮೆಲ್ಲರ ಭಾವವು ಇದುವೇ ಅಲ್ಲದ…
      ನಮ್ಮ ಗುರು,ನಮ್ಮ ಮಠ….ಹರೇ ಕೃಷ್ಣ……

  1. “ದಿನಾ ಶಾಲೆಗೆ ಹೋಪ ಬದಲು, ದಿನಾ ಮಠಕ್ಕೆ ಹೋದರೆ ಎಷ್ಟು ಒಳ್ಳೆದಲ್ಲಾ ಅಮ್ಮಾ!”. – ನಿಮ್ಮ ಮಗುವಿನ ಈ ಮಾತು ಕೇಳಿ, ಮನವಷ್ಟೇ ಅಲ್ಲ – ಕಣ್ಣಾಲಿಗಳೂ ತುಂಬಿದವು ಭಾಷ್ಪದಲಿ.
    ಕಾರಣವಿದ್ದು ಪ್ರೀತಿಸುವವರು ಹಲವರು, ಅಕಾರಣವಾಗಿ ಪ್ರೀತಿಸುವವರು ಕೆಲವೇ ಕೆಲವರು; ಅದರಲ್ಲೂ, ಯಾವುದೇ condition ಹಾಕದೇ, ತನ್ನ ಬಳಿ ಬಂದವರನ್ನೆಲ್ಲ ‘ಅವರಿದ್ದಂತೆಯೇ ಸ್ವೀಕರಿಸಿ ಪ್ರೀತಿಯ ಅಮೃತವರ್ಷದಲ್ಲಿ ತೋಯಿಸುವವರು’ ಒಬ್ಬರೇ… ನಮ್ಮ ಪ್ರೀತಿಯ ಶ್ರೀಸಂಸ್ಥಾನದವರು. 🙏

    1. ಹರೇ ರಾಮ.
      ನಮ್ಮನ್ನು ಪೊರೆವ ಗುರು ಶ್ರೀ ಸಂಸ್ಥಾನ.
      ಸನ್ಮಾರ್ಗದತ್ತ ನಡೆಸುವ ಗುರು ನಮ್ಮಪ್ರೀತಿಯ ಶ್ರೀ ಸಂಸ್ಥಾನ.

    2. ಹೌದು, ನಮ್ಮನ್ನು ನಾವು ಹೇಗೆಯೋ ಹಾಗೇ ಸ್ವೀಕರಿಸಿ ಹರಸುವರು ನಮ್ಮ ಸಂಸ್ಥಾನ..

  2. ಲಕ್ಷಾಂತರ ಭಕ್ತರ ಮನದಾಳದ ಭಾವನೆಗೆ ಅಕ್ಷರ ರೂಪ ನೀಡಿದ್ದೀರಿ ಅಕ್ಕಾ. ಹರೇರಾಮ 🙏

  3. Hare Rama 🙏.
    Gurupeeta Shrigurugalu Namma Gurugalu evella nanage tilidaddu Namma preetiya Shrisamsthana peetakke Banda balikavashte.
    Avara krupege patraragalu arhate beku. Adrushtavu beku.Adu nammalliye eruvudu.Navu ondu hejje mundittare avaru nammedege Hattu hejje ettu baruttare.
    Omme Shrigurugala krupe doretavaru yaru hintirugi noduvude Ella.Edu nannobbana anubhavavalla.
    Nooraru janara anubhava.
    Namma ShriSamsthana samajodharakkagi madida kelasagalu yellarigu vedyavashte. Adannu yellaru tilidavare.Shrigurugalu noorkala Bali samajadalli ennu hechina sadhakaragali. Keerthishikharavannerali yendu Prabhu ShriRamanalli bedikolluve.

  4. ಹರೇ ರಾಮ.
    ನಮ್ಮನ್ನೆಲ್ಲಾ ಪೊರೆವ ಗುರು ಶ್ರೀಸಂಸ್ಥಾನ .
    ಸನ್ಮಾರ್ಗದತ್ತ ಕೊಂಡೊಯ್ಯುವ ಗುರು ಶ್ರೀಸಂಸ್ಥಾನ.
    ನಮ್ಮೊಳಗಿನ ಅಂಧಕಾರ ದೂರ ಮಾಡವ ಗುರು ನಮ್ಮ ಪ್ರೀತಿಯ ಶ್ರೀಸಂಸ್ಥಾನ.

Leave a Reply

Your email address will not be published. Required fields are marked *