ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ದೇವರ ದರ್ಶನಕ್ಕೆ ವ್ಯವಸ್ಥೆ

ದೇವಾಲಯ

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು.

ಈ ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣದ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪ-ತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ಈ ಅವಕಾಶಗಳನ್ನು ನೀಡಲಾಯಿತು.

ಸರಕಾರದ ನಿಯಮಗಳ ಪ್ರಕಾರ ಜನರ ದೇಹದ ಉಷ್ಣಾಂಶವನ್ನು ನೋಡಿ, ಸಾನಿಟೈಜರ್ ಸಿಂಪಡಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶ್ರೀದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀಕ್ಷೇತ್ರದ ಉಪಾಧಿವಂತರು, ಊರಿನ ನಾಗರಿಕರು ಈ ವ್ಯವಸ್ಥೆಗೆ ಗೌರವ ನೀಡಿ, ಶಾಂತಿ ಸಮಾಧಾನಗಳಿಂದ ಅಚ್ಚುಕಟ್ಟಾಗಿ ದರ್ಶನ ಪಡೆದರು. ಅವರೆಲ್ಲರಿಗೂ ಶ್ರೀದೇವಾಲಯದ ಆಡಳಿತ ಹಾರ್ದಿಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

ಈ ವೇಳೆಯಲ್ಲಿ ಆತ್ಮಲಿಂಗಕ್ಕೆ ನಿರಂತರ ಗಂಗಾಜಲಾಭಿಷೇಕ ಏರ್ಪಡಿಸಲಾಗಿತ್ತು. ಪ್ರಸ್ತುತದಲ್ಲಿ ನಮ್ಮ ರಾಷ್ಟ್ರದ ಗಡಿಯಲ್ಲಿ ಹೊರಾಡುತ್ತಿರುವ ನಮ್ಮ ಧೀರಯೋಧರಿಗೆ ಜಯ ಸಿಗಲೆಂದು ಮತ್ತು ರಾಷ್ಟ್ರದಲ್ಲಿ ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೊವಿಡ್-೧೯ ಸಂಪೂರ್ಣವಾಗಿ ನಾಶಹೊಂದುವಂತೆ ಶ್ರೀಮಹಾಬಲೇಶ್ವರನಲ್ಲಿ ಪ್ರಾರ್ಥಿಸಿಕೊಂಡು ಈ ಧಾರಾಭಿಷೇಕವನ್ನು ಮಾಡಲಾಯಿತು.

ಗ್ರಹಣ ಮೋಕ್ಷದ ನಂತರ ಸ್ಥಳಶುದ್ಧಿ ಮಾಡಿ, ಶುದ್ಧಿ ಹೋಮ ಮಾಡಿ ಶ್ರೀದೇವರಿಗೆ ವಿಶೇಷ ಮಹಾಪೂಜೆಯನ್ನು ಮಾಡಲಾಯಿತು. ವೇ. ಪರಮೇಶ್ವರ ಮಾರ್ಕಾಂಡೆ ಇವರು ಮಹಾಪೂಜೆಯನ್ನು ನೆರವೇರಿಸಿದರು.

Author Details


Srimukha

Leave a Reply

Your email address will not be published. Required fields are marked *