ಯಕ್ಷಕಲೆಯ ಧ್ರುವನಕ್ಷತ್ರ: ರಾಘವೇಶ್ವರ ಶ್ರೀ ಬಣ್ಣನೆ

ಸುದ್ದಿ

ಬೆಂಗಳೂರು: ರಸ ಋಷಿಯೆಂದೇ ಯಕ್ಷಗಾನ ಪ್ರಿಯರಿಂದ ಕರೆಸಿಕೊಂಡಿದ್ದ ಖ್ಯಾತ ಭಾಗವತ, ಪ್ರಸಂಗಕರ್ತ ಮತ್ತು ಸೃಜನಶೀಲ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ಅವರ ನಿಧನದಿಂದ ಈ ಅಪೂರ್ವ ಕಲೆಯ ಪ್ರಮುಖ ಕೊಂಡಿ ಕಳಚಿಕೊಂಡಂತಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹ್ವಾಸ್ವಾಮೀಜಿಯವರು ಬಣ್ಣಿಸಿದ್ದಾರೆ.
ಯಕ್ಷರಂಗದ ಧ್ರುವನಕ್ಷತ್ರ ಎನಿಸಿಕೊಂಡ ಅವರ ಅಪೂರ್ವ ಸಾಧನೆ ಅಜರಾಮರ ಎಂದು ಸ್ವಾಮೀಜಿ ವಿವರಿಸಿದ್ದಾರೆ.
ಯಕ್ಷಗಾನದ ಸ್ವರೂಪ, ವೈವಿಧ್ಯ ಮತ್ತು ಗುಣಮಟ್ಟದ ಬಗೆಗಿನ ವಿಶ್ವಕೋಶ ಎನಿಸಿಕೊಂಡಿದ್ದ ಭಾಗವತರು, ನೋತಿಗುಡ್ಡದ ಕುಟೀರದಲ್ಲಿ ಯಕ್ಷಕಲೆಯ ಮೌನಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಭಾಗವತಿಕೆ ಮೂಲಕ ಯಕ್ಷಕಲಾ ಸೇವೆ ಆರಂಭಿಸಿದ್ದ ಇವರದ್ದು ನೃತ್ಯ, ಚೆಂಡೆ, ಮದ್ದಳೆ, ವೇಷಗಾರಿಕೆಯಲ್ಲೂ ಎತ್ತಿದ ಕೈ. 1966ರಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ ಕೈಗೊಂಡು ತನ್ನ ಇಡೀ ಜೀವನವನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟಿದ್ದರು ಎಂದು ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ರಾಮಾಯಣ, ಮಹಾಭಾರತ, ಭಾಗವತ, ರಾಮ ಕೃಷ್ಣ ಚರಿತೆ, ಗೋ ಮಹಿಮಾಯಾನ, ಮಕ್ಕಳಿಗಾಗಿ ಚೈತ್ರ ಪೂರ್ಣಿಮಾ, ಮೇಘಕೇತ ಹೀಗೆ 200ಕ್ಕೂ ಹೆಚ್ಚು ಪ್ರಸಂಗಗಳನ್ನು ಸೃಷ್ಟಿಸಿದ್ದು ಇವರ ಸೃಜನಶೀಲತೆಗೆ ಸಾಕ್ಷಿ. ಯಕ್ಷಕಲೆ ಮೂಲಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಾಧ್ಯತೆಯನ್ನು ಇವರು ತೋರಿಸಿಕೊಟ್ಟಿದ್ದರು. ಶ್ರೀಮಠದ ಜತೆ ನಿಕಟ ನಂಟು ಹೊಂದಿದ್ದ ಭಾಗವತರು ಹಲವು ಬಾರಿ ಶ್ರೀಮಠದಲ್ಲಿ ಕಾರ್ಯಕ್ರಮಗಳನ್ನೂ ನೀಡಿದ್ದರು ಎಂದು ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.

Author Details


Srimukha

Leave a Reply

Your email address will not be published. Required fields are marked *