” ಗೋ ಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅನಿವಾರ್ಯ ” : ಡಾ. ಚಿತ್ರಾ ಎ ಉಡುಪಿ

ಮಾತೃತ್ವಮ್

 

” ಗೋವು ನಮ್ಮ ಬದುಕಿಗೆ ಅನಿವಾರ್ಯ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗೋ ಶಕ್ತಿಗೆ ಅವಲಂಬಿತರಾಗಿ ಗೋ ಆಧಾರಿತ ಆರ್ಥಿಕತೆಯು ನವೀಕರಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯವಿದೆ ” ಎಂಬ ಮಾತುಗಳು ಮಂಗಳೂರು ಮಂಡಲ ಉಡುಪಿ ವಲಯದ ಹಿಳ್ಳೆಮನೆ ಮೂಲದ ಬೊಟ್ರಂಪಾಡಿ ನಿವಾಸಿಗಳಾಗಿರುವ ಡಾ. ವೆಂಕಟಾಚಲಂ ಅವರ ಪತ್ನಿ ಡಾ. ಚಿತ್ರಾ ಅರಮನಡ್ಕ ಅವರದ್ದು.

 

ಮಣಿಪಾಲ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಚಿತ್ರಾ ಅರಮನಡ್ಕದ ಮಹಾಲಿಂಗ ಭಟ್, ಚಂದ್ರಕಲಾ ದಂಪತಿಗಳ ಪುತ್ರಿ.

 

” ಸುಮಾರು ಹದಿನೈದು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದೇನೆ. ಗೋವುಗಳ ಬಗ್ಗೆ ತುಂಬಾ ಪ್ರೀತಿಯಿರುವ ಕಾರಣ ಹಾಗೂ ನಮ್ಮ ಮನೆಯವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಗೋಸೇವೆಗೆ ನನ್ನ ಆತ್ಮೀಯರು,ಪರಿಚಿತರು, ಸ್ನೇಹಿತರು ಕೈ ಜೋಡಿಸಿದ್ದಾರೆ.‌ ಗೋಪ್ರೇಮಿಗಳಿಗೆ ಈ ಯೋಜನೆಯ ಮೂಲಕ ಅತ್ಯಂತ ಸುಲಭವಾಗಿ ಗೋಸೇವೆ ಮಾಡುವ ಅವಕಾಶ ದೊರಕುತ್ತದೆ ಎಂದು ಅನೇಕ ಮಂದಿ ಆತ್ಮೀಯರು ಸಂತಸ ವ್ಯಕ್ತಪಡಿಸಿದ್ದಾರೆ ” ಎನ್ನುವ ಡಾ. ಚಿತ್ರಾ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಒಳಿತೇ ಆಗಿದೆ. ಮನದಲ್ಲಿ ಸ್ಮರಿಸಿಕೊಂಡ ಕಾರ್ಯಗಳು ಸಹಾ ಶ್ರೀಗುರುಗಳ ಕೃಪೆಯಿಂದ ನೆರವೇರಿವೆ. ನನ್ನ ಇಬ್ಬರು ಮಕ್ಕಳಿಗೂ ಶ್ರೀಮಠಕ್ಕೆ ಹೋಗುವುದೆಂದರೆ ತುಂಬಾ ಇಷ್ಟ. ಅನೇಕ ಬಾರಿ ಶ್ರೀಮಠಕ್ಕೆ ಹೋಗಿ ಬಂದಿದ್ದೇವೆ. ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡಿದ್ದೇವೆ. ನಮ್ಮವರಿಗೂ ಶ್ರೀಮಠದ ಸೇವೆಯಲ್ಲಿ ಆಸಕ್ತಿಯಿದೆ. ವಲಯ ಶಿಷ್ಯಮಾಧ್ಯಮ ಪ್ರಧಾನರಾಗಿ ಸೇವೆ ಸಲ್ಲಿಸುವ ಅವರ ಸಂಪೂರ್ಣ ಸಹಕಾರದಿಂದ ನನ್ನ ಗೋಸೇವೆ, ಶ್ರೀಮಠದ ಸೇವೆ ನಿರ್ವಿಘ್ನವಾಗಿ ಮುಂದುವರಿಯುತ್ತದೆ ” ಎಂದು ಮನದುಂಬಿ ನುಡಿಯುವ ಇವರಿಗೆ ಬದುಕಿನಲ್ಲಿ ಒಳಿತನ್ನು ಬಯಸುತ್ತಾ ಇನ್ನಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ನಿರತವಾಗಿರುವ ಹಂಬಲ.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *