“ಬಾಳಿಗೆ ಬೆಳಕು ದೊರಕಿದ್ದು ಶ್ರೀಗುರು ಸೇವೆಯಿಂದ ” : ಪಾವನಾ .ಪಿ.ಭಟ್, ಮಂಗಳೂರು

ಮಾತೃತ್ವಮ್

” ೧೯೯೯ ರಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು ನಾವು.‌ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇವೆ. ಅಂದಿನಿಂದ ಇಂದಿನ ವರೆಗೂ ಬಾಳಿನ ಏರಿಳಿತಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀರಾಮ ದೇವರ ಅನುಗ್ರಹ, ಶ್ರೀಗುರುಗಳ ಕೃಪೆ ” ಎಂದು ಹೃದಯ ತುಂಬಿ ನುಡಿಯುವವರು ಮಂಗಳೂರು ಮಧ್ಯ ವಲಯದ ಕುಂಡೇರಿ ಮೂಲದ ಕಾಂಚನ ಪರಮೇಶ್ವರ ಭಟ್ ಅವರ ಪತ್ನಿ ಪಾವನಾ .

ನೆಡ್ಲೆಯ ಕಡೆಂಗೋಡ್ಲು ನರಸಿಂಹ ಭಟ್ ಹಾಗೂ ಲಕ್ಷ್ಮೀ ಭಟ್ ಇವರ ಪುತ್ರಿಯಾದ ಪಾವನಾ ಅವರಿಗೆ ಧಾರ್ಮಿಕ ಕಾರ್ಯಗಳಿಗೆ ತುಂಬಾ ಆಸಕ್ತಿಯಿದೆ.
ಆರಂಭದಿಂದಲೇ ಪತಿಯ ಜೊತೆಗೆ ಶ್ರೀಮಠದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಪಾವನ ಶ್ರೀಗುರುಗಳ ಆಶೀರ್ವಚನಗಳಿಂದ ತುಂಬಾ ಪ್ರೇರಣೆ ಪಡೆದವರು. ಈಗಲೂ ದಿನನಿತ್ಯ ಎರಡು ಹೊತ್ತು ಶ್ರೀಕರಾರ್ಚಿತ ಪೂಜೆಯನ್ನು ನೋಡುವ ಇವರಿಗೆ ಬದುಕಿನಲ್ಲಿ ನೆಮ್ಮದಿ ಶಾಂತಿ ,ಸಂತೋಷ ನೆಲೆಸಿರಲು ಕಾರಣ ಶ್ರೀಗುರು ಸೇವೆಯಿಂದ ಎಂಬ ನಂಬಿಕೆ.

ಪತಿಯ ಅನಾರೋಗ್ಯದ ಕಂಗೆಟ್ಟ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವಾಗಲೇ ಶ್ರೀಗುರುಗಳ ಮಂತ್ರಾಕ್ಷತೆ ದೊರಕಿದ್ದು ಜೀವನದಲ್ಲಿ ಮರೆಯಲಾರದ ಅನುಭವ ಎಂದು ಭಾವುಕರಾಗುವ ಪಾವನಾ ಮಂತ್ರಾಕ್ಷತೆಯ ಮಹಿಮೆಯಿಂದಲೇ ಎದುರಾದ ಸಂಕಷ್ಟಗಳೆಲ್ಲ ಪರಿಹಾರವಾದವು ಎಂದು ದೃಢವಾದ ವಿಶ್ವಾಸ ಹೊಂದಿದ್ದಾರೆ. ಮಾಸದ ಮಾತೆಯಾಗಿ ಸೇವೆ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಇವರು ಈಗಾಗಲೇ ಎರಡು ಹಸುಗಳ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿ ಇದೀಗ ಮೂರನೇ ಹಸುವಿನ ನಿರ್ವಹಣಾ ವೆಚ್ಚದ ಸಂಗ್ರಹದಲ್ಲಿದ್ದಾರೆ.

” ಮಾಸದ ಮಾತೆಯಾಗಿ ಸೇರುವಾಗ ಗುರಿ ತಲುಪುವ ಬಗ್ಗೆ ಭರವಸೆ ಇರಲಿಲ್ಲ. ಆದರೂ ಶ್ರೀಗುರುಗಳನ್ನು ಸ್ಮರಿಸುತ್ತಾ ಶ್ರದ್ಧೆಯಿಂದ ಪ್ರಯತ್ನಿಸಿದೆ. ಗೋವಿನಿಂದ ಅದೆಷ್ಟೋ ಉಪಕಾರಗಳನ್ನು ಪಡೆಯುವ ನಾವು ಕಿಂಚಿತ್ತಾದರೂ ಅದರ ಋಣ ತೀರಿಸಬೇಕು ಎಂಬುದು ನನ್ನ ಧ್ಯೇಯ. ಅದಕ್ಕಾಗಿ ಪರಿಚಿತರು, ನೆಂಟರು, ಮಿತ್ರರು ಎಂದು ಎಲ್ಲರ ಬಳಿಯೂ ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿಸಿದೆ. ಗೋಮಾತೆಯ ಸೇವೆ ಎಂದಾಗ ಯಾರೂ ಯಾವುದೇ ಪ್ರಶ್ನೆಯನ್ನೂ ಕೇಳದೆ ತಮಗೆ ಸಾಧ್ಯವಾದಷ್ಟು ಸಹಕಾರ ನೀಡಿದ್ದಾರೆ. ಇದು ಸಹಾ ಶ್ರೀಗುರುಗಳ ಕೃಪೆ ಎಂದು ನಂಬುವವಳು ನಾನು ” ಎನ್ನುವ ಪಾವನಾ ಅವರಿಗೆ ಇದುವರೆಗೆ ತನಗೆ ಗೋಸೇವೆಯಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀಗುರುಗಳ, ಗೋಮಾತೆಯ, ಶ್ರೀರಾಮ ದೇವರ ಕೃಪೆ ದೊರಕಲಿ ಎಂಬ ಅಭಿಲಾಷೆ. ಶ್ರೀಮಠದ ಸೇವೆ ಮಾಡಲು ಇನ್ನಷ್ಟು ಅವಕಾಶಗಳು ದೊರಕಲಿ, ಸೇವೆ ಮಾಡುವ ಸೌಭಾಗ್ಯ ತಮಗೆ ಒದಗಿ ಬರಲಿ ಎಂಬುದೇ ಅವರ ಆಶಯ..

Author Details


Srimukha

Leave a Reply

Your email address will not be published. Required fields are marked *