” ಗೋಸೇವಾ ಮನೋಭಾವವಿದ್ದರೆ ಗುರಿ ತಲುಪುವ ಹಾದಿ ಶ್ರೀಗುರುಗಳು ತೋರುತ್ತಾರೆ ” : ಸ್ವಪ್ನಲಕ್ಷ್ಮಿ .ಕೆ

ಮಾತೃತ್ವಮ್

 

” ಶ್ರೀಮಠದ ಸೇವೆಯಲ್ಲಿ ತುಂಬಾ ಆಸಕ್ತಿಯಿದ್ದರೂ ನನ್ನ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆ ಮಾಸದ ಮಾತೆಯಾಗಿ ಗುರಿ ಸೇರಲು ಸಾಧ್ಯವೇ ಎಂಬ ಆತಂಕದಿಂದ ಆರಂಭದಲ್ಲಿ ಮಾಸದ ಮಾತೆಯಾಗಲು ತುಸು ಅಳುಕಿದೆ. ಮುಂದೆ ಶ್ರೀಗುರುಗಳೇ ” ಮಾಸದ ಮಾತೆಯಾಗು ” ಎಂದು ಹರಸಿದಾಗ ನನ್ನ ತುಮುಲವನ್ನು ಭಿನ್ನವಿಸಿದೆ.‌ ” ನಿನಗೆ ಶೀಘ್ರವಾಗಿ ಗುರಿ ಮುಟ್ಟಲು ಸಾಧ್ಯವಿದೆ ” ಎಂಬ ಶ್ರೀಗುರುಗಳ ಅನುಗ್ರಹ ಬಹಳ ಬೇಗನೆ ಫಲಿಸಿತು. ಅಪ್ಪ, ಅಮ್ಮ, ತಂಗಿ ಹಾಗೂ ಮನೆಯವರ ಸಹಕಾರದಿಂದ ಬಹಳ ಬೇಗನೆ ಗುರಿ ತಲುಪಿದೆ ” ಎಂಬ ಸಂತಸದ ನುಡಿಗಳು ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಪಾಂಡೇಲು ಅರವಿಂದ ಕೃಷ್ಣ ಅವರ ಪತ್ನಿ ಸ್ವಪ್ನಲಕ್ಷ್ಮಿ ಅವರದ್ದು.

 

ಕಮ್ಮಜೆ ಬಾಲಕೃಷ್ಣ ಭಟ್ ,ಸುಲೋಚನ ದಂಪತಿಗಳ ಪುತ್ರಿಯಾದ ಸ್ವಪ್ನ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿದ್ದಾರೆ.

 

” ಗೋಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಶ್ರೇಯಸ್ಸಾಗಿದೆ. ಗೋಮಾತೆಯ ಸೇವೆ ಮಾಡುವ ಮನೋಭಾವ ಇದ್ದರೆ ಸಾಕು, ಶ್ರೀಗುರುಗಳ ಅನುಗ್ರಹದಿಂದ ಗುರಿ ಸೇರುವುದು ಕಷ್ಟವಲ್ಲ. ಬಂಧುಗಳ ಸಹಕಾರದಿಂದ ನಾನು ಗುರಿ ಮುಟ್ಟಿದರೂ ಮಂಗಳೂರಿನ ಒಬ್ಬರು ಮಾತೆ ಗೋಸೇವೆಯ ವಿಚಾರವನ್ನು ಹೇಳಿದಾಗ ತಾವಾಗಿಯೇ ನೀಡಿದ ಕಾಣಿಕೆ ಅಮೂಲ್ಯ ಎನಿಸಿತು. ಇದು ಜೀವನದಲ್ಲಿ ಮರೆಯಲಾರದ ಘಟನೆ . ಎಲ್ಲಾ ಸಮಾಜದವರೂ ಗೋಸೇವೆಗೆ ಪ್ರೋತ್ಸಾಹ ನೀಡುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ ” ಎನ್ನುವ ಇವರು ಲಕ್ಷ ಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದ್ದಾರೆ.

 

ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾದ ಇವರು ಮಗನ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವವೇ ಮೊದಲಾದ ವಿಶೇಷ ದಿನಗಳಲ್ಲಿ ಗೋಮಾತೆಗಾಗಿ ಕಾಣಿಕೆ ತೆಗೆದಿರಿಸುತ್ತಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ವಪ್ನಲಕ್ಷ್ಮಿ ಹಾಗೂ ಕುಟುಂಬದವರಿಗೆ ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಅಭಿಲಾಷೆಯಿದೆ.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *